ಬೆಂಗಳೂರು: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ವಾಹನ ಸವಾರನ ಸಾವಿಗೆ ಕಾರಣವಾಗಿದ್ದ ಗುಂಡಿಯನ್ನು ಜಲಮಂಡಳಿ ಅಧಿಕಾರಿಗಳು ಕೊನೆಗೂ ಮುಚ್ಚಿದ್ದಾರೆ.
ಕಾವೇರಿ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಿರ್ವಹಿಸುತ್ತಿರುವ ಜಲಮಂಡಳಿ, ದುರಸ್ತಿ ಕಾಮಗಾರಿಗೆ ದೊಡ್ಡ ಗುಂಡಿ ತೆಗೆದಿತ್ತು. ಸೆ.18ರ ರಾತ್ರಿ ಇದೇ ಗುಂಡಿಗೆ ಬಿದ್ದುಮಲ್ಲಸಂದ್ರದ ನಿವಾಸಿಯಾದ ದ್ವಿಚಕ್ರ ವಾಹನ ಸವಾರ ಆನಂದ್ ಮೃತಪಟ್ಟಿದ್ದರು.
ಈ ಅವಘಡ ಸಂಭವಿಸಿ ಒಂದು ತಿಂಗಳಾದರೂ ಗುಂಡಿ ಮುಚ್ಚಿರಲಿಲ್ಲ. ‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ನರ ಬಲಿ ಬಳಿಕವೂ ಸರಿಯಾಗದ ರಸ್ತೆ’ ಎಂಬ ವರದಿಯನ್ನು ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ಇನ್ನೆಷ್ಟು ಜನ ಈ ಗುಂಡಿಗೆ ಬಲಿಯಾಗಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ವರದಿ ಪ್ರಕಟವಾದ ದಿನವೇ ಸ್ಥಳಕ್ಕೆ ದೌಡಾಯಿಸಿರುವ ಜಲಮಂಡಳಿ ಅಧಿಕಾರಿಗಳು, ಗುತ್ತಿಗೆದಾರರ ಮೂಲಕ ಗುಂಡಿ ಮುಚ್ಚಿಸಿದ್ದಾರೆ.
1,601 ಮಿಲಿ ಮೀಟರ್ ವ್ಯಾಸದ ಮುಖ್ಯ ಕೊಳವೆ ಅಳವಡಿಕೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಗುತ್ತಿಗೆದಾರರು ಈ ಕಾಮಗಾರಿಯನ್ನು ಮೂರು ತಿಂಗಳಲ್ಲೇ ಪೂರ್ಣಗೊಳಿಸಿದ್ದಾರೆ. ಕೊಳವೆ ಮಾರ್ಗಕ್ಕೆ ಕವಾಟು (ವಾಲ್ವ್) ಅಳವಡಿಸುವ ಕಾಮಗಾರಿ ಮಾತ್ರ ಪ್ರಗತಿಯಲ್ಲಿತ್ತು. ಅದಕ್ಕಾಗಿ ರಸ್ತೆ ಅಗೆದಿದ್ದು, ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು.
‘ಅ.30ರಿಂದ ಬಾಗಲಗುಂಟೆ ಜಾತ್ರೆ ಆರಂಭವಾಗುವುದರಿಂದ ವಾಹನ ಸಂಚಾರಕ್ಕೆ ಅನಾನುಕೂಲ ಆಗುವುದನ್ನು ತಪ್ಪಿಸಲು ಗುಂಡಿ ಮುಚ್ಚಲಾಗಿದೆ. ಜಾತ್ರೆ ಮುಗಿದ ಬಳಿಕ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳಲು ಅನುಮತಿ ನೀಡಲಾಗಿದೆ’ ಎಂದು ಜಲ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.