ಬೆಂಗಳೂರು: ಮನೆ ಮಾಲೀಕರ ಕಣ್ತಪ್ಪಿಸಿ ಆಭರಣಗಳನ್ನು ಕಳ್ಳತನ ಮಾಡಿ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಾಹಡೋಲ್ ಜಿಲ್ಲೆಯ ನಿವಾಸಿ ಪಂಕಜ್ ಕುಮಾರ್ ಮಿಶ್ರ (28) ಎಂಬಾತನನ್ನು ಬಂಧಿಸಿ, ₹12 ಲಕ್ಷ ಮೌಲ್ಯದ 141 ಗ್ರಾಂ. ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಪುಷ್ಕರ ಅವರು ಎರಡು ವರ್ಷಗಳ ಹಿಂದೆ ಮನೆ ಕೆಲಸಕ್ಕೆ ಪಂಕಜ್ನನ್ನು ನೇಮಕ ಮಾಡಿಕೊಂಡಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಮಾಲೀಕರು, ವಾಪಸ್ ಬಂದಾಗ ಆರೋಪಿ ಮನೆಯಲ್ಲಿ ಇರಲಿಲ್ಲ. ಅನುಮಾನಗೊಂಡು ಬೀರು ತೆರೆದು ನೋಡಿದಾಗ ಆಭರಣ ನಾಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ, ಮಧ್ಯಪ್ರದೇಶದಲ್ಲಿ ಆರೋಪಿ ತಲೆಮರೆಸಿಕೊಂಡಿರುವುದು ಗೊತ್ತಾಯಿತು. ಜಯದ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ನಲ್ಲಿ ಕೆಲಸಕ್ಕಿದ್ದ ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಈತ ಪಿಯುಸಿ ಓದಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳವು ಆಭರಣಗಳನ್ನು ಮಣಪ್ಪುರಂ ಗೋಲ್ಡ್ಗೆ ಮಾರಾಟ ಮಾಡಲಾಗಿತ್ತು. ಆಭರಣಗಳನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.