ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಂಬಂಧಿಕರ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪದಡಿ ಚಂದ್ರಾ ಶರ್ಮಾ (58) ಅವರನ್ನು ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರ್.ಟಿ.ನಗರ ಮಠದಹಳ್ಳಿ ಮುಖ್ಯರಸ್ತೆ ನಿವಾಸಿ ಚಂದ್ರಾ ಶರ್ಮಾ ಇತ್ತೀಚೆಗೆ ಕೃತ್ಯ ಎಸಗಿದ್ದರು. ಇವರನ್ನು ಬಂಧಿಸಿ ₹8.51 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಲಲಿತಾ, ಸಂಬಂಧಿಯಾದ ಚಂದ್ರಾ ಶರ್ಮಾ ಸೇರಿದಂತೆ ಎಂಟು ಮಂದಿ ಜೊತೆಗೆ ಕೇರಳಕ್ಕೆ ಜ.25ರಂದು ಹೋಗಿದ್ದರು. ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಜ.27ಕ್ಕೆ ರೈಲಿನಲ್ಲಿ ಬೆಂಗಳೂರಿಗೆ ವಾಪಸು ಬಂದಿದ್ದರು.’
‘ಲಲಿತಾ ಅವರು ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಆರೋಪಿ ಚಂದ್ರಾ ಶರ್ಮಾ, ಕಂಟೋನ್ಮೆಂಟ್ ನಿಲ್ದಾಣದಲ್ಲಿ ಇಳಿದಿದ್ದರು. ಲಲಿತಾ ಅವರು ನಿಲ್ದಾಣ ಬಳಿ ಬ್ಯಾಗ್ ಪರಿಶೀಲನೆ ನಡೆಸಿದಾಗ, ಚಿನ್ನಾಭರಣ ಇರಲಿಲ್ಲ. ಕಳ್ಳತನ ಬಗ್ಗೆ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಜೊತೆಯಲ್ಲಿ ಪ್ರಯಾಣಿಸಿದ್ದ ಸಂಬಂಧಿ ಚಂದ್ರಾ ಶರ್ಮಾ ಅವರೇ ಆರೋಪಿ ಎಂಬುದು ಗೊತ್ತಾಯಿತು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.