ಬೆಂಗಳೂರು: ಇಯರ್ ಫೋನ್ ಇಲ್ಲವೆಂದು ಹೇಳಿದ್ದ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದ ಆರೋಪದಡಿ ತೌಫಿಕ್ ಪಾಷಾ ಎಂಬಾತನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
‘ಗಾಂಧಿನಗರದ ಮಳಿಗೆಯೊಂದಕ್ಕೆ ಡಿ. 25ರಂದು ಹೋಗಿದ್ದ ಆರೋಪಿ, ಮಾಲೀಕರನ್ನು ಬೆದರಿಸಿ ಸುಲಿಗೆ ಮಾಡಿದ್ದ. ಈ ಬಗ್ಗೆ ಮಾಲೀಕರು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಸರಗಳವು ಹಾಗೂ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಸಂಗತಿ ಹೊರಬಂತು’ ಎಂದು ಪೊಲೀಸರು ಹೇಳಿದರು.
‘ಕಂಪನಿಯೊಂದರ ಇಯರ್ ಫೋನ್ ಖರೀದಿಸಲು ಆರೋಪಿ, ಅಂಗಡಿಗೆ ಹೋಗಿದ್ದ. ಇಯರ್ ಫೋನ್ ಇಲ್ಲವೆಂದು ಮಾಲೀಕ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿ, ಚಾಕು ತೋರಿಸಿ ಮಾಲೀಕರ ಬಳಿ ಇದ್ದ ಇಯರ್ ಫೋನ್ ಕಿತ್ತುಕೊಂಡು ಹೋಗಿದ್ದ. ಈ ಸಂಗತಿ ದೂರಿನಲ್ಲಿತ್ತು.’
’ತೌಫಿಕ್ ಹಾಗೂ ಸಹಚರರು, ಸರಗಳವು ಹಾಗೂ ಮನೆಯಲ್ಲಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೆ.ಪಿ.ಅಗ್ರಹಾರ, ಬ್ಯಾಟರಾಯನಪುರ, ರಾಜರಾಜೇಶ್ವರಿನಗರ, ಉಪ್ಪಾರಪೇಟೆ ಹಾಗೂ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿರುವ ಮಾಹಿತಿ ಇದೆ. ಸದ್ಯ ತೌಫೀಕ್ ಮಾತ್ರ ಸಿಕ್ಕಿಬಿದ್ದಿದ್ದು, ಸಹಚರರು ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.