ADVERTISEMENT

ನಿನ್ನೆ ಮರೆತವರು ಇಂದು ಬಾಳಲಾರರು

ಸಾಹಿತಿ ಎಂ.ಚಿದಾನಂದಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 20:03 IST
Last Updated 30 ನವೆಂಬರ್ 2018, 20:03 IST
ಸಾಹಿತಿ ಎಂ.ಚಿದಾನಂದಮೂರ್ತಿ ಅವರನ್ನು ಎಸ್.ಸೆಲ್ವಕುಮಾರ್ ಗೌರವಿಸಿದರು.
ಸಾಹಿತಿ ಎಂ.ಚಿದಾನಂದಮೂರ್ತಿ ಅವರನ್ನು ಎಸ್.ಸೆಲ್ವಕುಮಾರ್ ಗೌರವಿಸಿದರು.   

ಬೆಂಗಳೂರು:‘ನಿನ್ನೆಯನ್ನು ಮರೆತವರು ಇಂದು ಬಾಳಲಾರರು, ಮುಂದೆ ಬೆಳೆಯಲಾರರು. ನಿನ್ನೆ ಎಂಬುದು ನಮಗೆ ಹೆಮ್ಮೆ, ಸ್ಫೂರ್ತಿ. ಕನ್ನಡಿಗರಾಗಿ ಇರಲು ಮತ್ತು ಭಾರತೀಯರು ಎನಿಸಿಕೊಳ್ಳಲು ಹೆಮ್ಮೆಪಡಬೇಕು’ ಎಂದು ಸಾಹಿತಿ ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕನ್ನಡ ಸಂಘ ಗುರುವಾರ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಕ್ಷೇತ್ರದಲ್ಲಿ ಮೊದಲು ಸಾಧನೆ ಮಾಡಿದವರು ಮಹಿಳೆಯರು. ಸೂಳೆ ಸಂಕವ್ವ ವಚನ ರಚನೆ ಮಾಡುವ ಮೂಲಕ ಸಾಹಿತ್ಯ ಕೃಷಿಗೆ ನಾಂದಿ ಹಾಡಿದವರು. ಅಂಥವರನ್ನು ಮರೆಯಬಾರದು’ ಎಂದರು.

ADVERTISEMENT

ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ‘ಚಿದಾನಂದಮೂರ್ತಿ ಅವರು ಕನ್ನಡ ಸಂಸ್ಕೃತಿ, ಸಾಹಿತ್ಯದ ಸಂಶೋಧನೆ ಮೂಲಕ ಕನ್ನಡ ನಾಡಿಗೆನೀಡಿರುವ ಕೊಡುಗೆ ಅಪಾರ. ಅವರ ಕನ್ನಡದ ಬಗೆಗಿನ ನಿಷ್ಠೆ, ಪ್ರಾಮಾಣಿಕತೆ ಮತ್ತು ಕ್ರೀಯಾಶೀಲತೆಗಳು ಆದರ್ಶ ಪ್ರಾಯವಾಗಿವೆ’ ಎಂದು ಹೇಳಿದರು.

ಸಂಘದಅಧ್ಯಕ್ಷ ಕೆ.ವಿ.ಶಿವ ಕುಮಾರ್, ‘ಚಿದಾನಂದಮೂರ್ತಿ ಅವರ ಕನ್ನಡ ಸಂಸ್ಕೃತಿಯ ಹಿರಿಮೆ– ಗರಿಮೆ ಕೃತಿಯನ್ನು ನಮ್ಮ ಸಂಘದಿಂದ ಮುದ್ರಿಸಿ ಹಂಚುತ್ತಿದ್ದೇವೆ’ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿ ಪದಕ ಪಡೆದ ರೋಷನ್ ಪೇರಾವೋ, ಡಿ.ಚೇತನ್, ವಿಶ್ವೇಶ್ವರ ಉಡುಪ, ಕೆ.ರಾಮಚಂದ್ರರೆಡ್ಡಿ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.