ಬೆಂಗಳೂರು: ಎಚ್ಎಸ್ಆರ್ ಲೇಔಟ್ ಹಾಗೂ ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.
ಬಿಟಿಎಂ ಬಡಾವಣೆ ನಿವಾಸಿಗಳಾದ ವಿ.ಎಸ್. ಕೃಷ್ಣಮೂರ್ತಿ (60), ಪ್ರಕಾಶ್ ಹೆಬ್ಬಾರ್ (57) ಹಾಗೂ ಅರಕೆರೆ ನಿವಾಸಿ ಹಿತೇಷ್ (27) ಮೃತರು.
ತಿರುಪತಿಯಿಂದ ವಾಪಸ್ಸಾಗುತ್ತಿದ್ದಾಗ ಅಪಘಾತ: ‘ಕೃಷ್ಣಮೂರ್ತಿ ಹಾಗೂ ಪ್ರಕಾಶ್, ಸ್ನೇಹಿತರ ಜೊತೆ ಕಾರಿನಲ್ಲಿ ಇತ್ತೀಚೆಗೆ ತಿರುಪತಿಗೆ ಹೋಗಿದ್ದರು. ದೇವರ ದರ್ಶನ ಪಡೆದು, ವಾಪಸು ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ’ ಎಂದು ಎಚ್ಎಸ್ಆರ್ ಲೇಔಟ್ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಸ್ನೇಹಿತ ವೆಂಕಟೇಶ್, ಕಾರು ಚಲಾಯಿಸುತ್ತಿದ್ದರು. ಎಚ್ಎಸ್ಆರ್ ಲೇಔಟ್ 6ನೇ ಮುಖ್ಯರಸ್ತೆ ಬಳಿ ತಿರುವಿನಲ್ಲಿ ಭಾನುವಾರ ನಸುಕಿನ 4.30ರ ಸುಮಾರಿಗೆ ನಿಯಂತ್ರಣ ತಪ್ಪಿದ್ದ ಕಾರು, ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಕೃಷ್ಣಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಪ್ರಕಾಶ್ ತೀರಿಕೊಂಡಿದ್ದಾರೆ’ ಎಂದು ತಿಳಿಸಿದರು,
‘ವೆಂಕಟೇಶ್ ಹಾಗೂ ಮತ್ತೊಬ್ಬ ಸ್ನೇಹಿತರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ನಿದ್ದೆ ಮಂಪರಿನಲ್ಲಿದ್ದಿದ್ದರಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.
ಮರಕ್ಕೆ ಗುದ್ದಿದ ಬೈಕ್: ‘ವಾಜರಹಳ್ಳಿ ಸಮೀಪದ ತುರಹಳ್ಳಿ ಅರಣ್ಯಪ್ರದೇಶದ 100 ಅಡಿ ರಸ್ತೆ ಬಳಿ ಶನಿವಾರ ರಾತ್ರಿ ಮರವೊಂದಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಸವಾರ ಹಿತೇಷ್ ಮೃತಪಟ್ಟಿದ್ದಾರೆ. ಇವರು, ಕಾರ್ಖಾನೆಯೊಂದರ ಉದ್ಯೋಗಿ’ ಎಂದು ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.