ADVERTISEMENT

ಬಿಬಿಎಂಪಿ ಕಸ ತುಂಬಿಸುವ ಟಿಪ್ಪರ್‌ ಡಿಕ್ಕಿ: ವೃದ್ಧೆ ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 14:43 IST
Last Updated 12 ಆಗಸ್ಟ್ 2024, 14:43 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್‌ ಹಾಗೂ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ವೃದ್ಧೆ ಹಾಗೂ ಟೈಲರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಂಬೂಸವಾರಿ ದಿಣ್ಣೆ ಬಳಿ ಬಸ್‌ ಹತ್ತಲು ರಸ್ತೆ ದಾಟುವಾಗ ಬಿಬಿಎಂಪಿಗೆ ಸೇರಿದ ಕಸ ತುಂಬಿಸುವ ಟಿಪ್ಪರ್‌ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಆಂಧ್ರಪ್ರದೇಶದ ಚಿತ್ತೂರಿನ ಆದಿಲಕ್ಷ್ಮಮ್ಮ(69) ಮೃತಪಟ್ಟ ವೃದ್ಧೆ.

‘ನಗರದಲ್ಲಿ ನೆಲಸಿದ್ದ ಪುತ್ರಿ ಮನೆಗೆ ಚಿತ್ತೂರಿನಿಂದ ಆದಿಲಕ್ಷ್ಮಮ್ಮ ಅವರು ಬಂದಿದ್ದರು. ಸೋಮವಾರ ಬೆಳಿಗ್ಗೆ ವಾಪಸ್‌ ಹೊರಟಿದ್ದರು. ಮಗಳು ರಸ್ತೆ ದಾಟಿ ಬಿಎಂಟಿಸಿ ಬಸ್ ಹತ್ತಿದ್ದರು. ಆದಿಲಕ್ಷ್ಮಮ್ಮ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಲಾರಿ ಚಾಲಕ ಮಹಮ್ಮದ್ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.

ಎರಡನೇ ಅಪಘಾತ: 15 ದಿನಗಳ ಅಂತರದಲ್ಲಿ ಬಿಬಿಎಂಪಿ ಕಸ ಸಾಗಿಸುವ ವಾಹನದಿಂದ ಎರಡನೇ ಅಪಘಾತ ಸಂಭವಿಸಿದೆ. ಇತ್ತೀಚೆಗಷ್ಟೇ ಕೆ.ಆರ್‌.ವೃತ್ತದಲ್ಲಿ ಟಿಪ್ಪರ್‌ ಡಿಕ್ಕಿಯಿಂದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಮೃತಪಟ್ಟಿದ್ದರು.

ಅತಿ ವೇಗ ತಂದ ಆಪತ್ತು

ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ 80 ಅಡಿ ರಸ್ತೆಯ ಮಂಗಳನಹಳ್ಳಿ ಕ್ರಾಸ್‌ ಬಳಿ ಬೈಕ್‌ವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಟೈಲರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರಿನ ವಿಶ್ವನಾಥ್‌ 34) ಮೃತಪಟ್ಟವರು. ಇವರು ಸುಂಕದಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

‘ಟೈಲರ್‌ ವೃತ್ತಿ ಮಾಡುತ್ತಿದ್ದ ವಿಶ್ವನಾಥ್‌ ಭಾನುವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಕೆಂಗೇರಿ ಕಡೆಯಿಂದ ಸುಂಕದಕಟ್ಟೆ ಕಡೆಗೆ ತೆರಳುತ್ತಿದ್ದರು. ವೇಗವಾಗಿ ತೆರಳುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿದೆ. ವಿಶ್ವನಾಥ್‌ ಅವರು ಹೆಲ್ಮೆಟ್‌ ಧರಿಸಿರಲಿಲ್ಲ. ಕೆಳಕ್ಕೆ ಬಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.