ADVERTISEMENT

ಟಿಪ್ಪು ಕಾಲದ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 22:02 IST
Last Updated 5 ಜೂನ್ 2020, 22:02 IST
ಕಾಳತಮ್ಮನಹಳ್ಳಿಯಲ್ಲಿ ಟಿಪ್ಪು ಕಾಲದ ಕನ್ನಡ ಶಿಲಾಶಾಸನವನ್ನು ಗ್ರಾಮಸ್ಥರ ನೆರವಿನಲ್ಲಿ ಪತ್ತೆ ಹಚ್ಚಿದ ಬಿಎಂಟಿಸಿ ಚಾಲಕ ಕೆ. ಧನಪಾಲ್‌
ಕಾಳತಮ್ಮನಹಳ್ಳಿಯಲ್ಲಿ ಟಿಪ್ಪು ಕಾಲದ ಕನ್ನಡ ಶಿಲಾಶಾಸನವನ್ನು ಗ್ರಾಮಸ್ಥರ ನೆರವಿನಲ್ಲಿ ಪತ್ತೆ ಹಚ್ಚಿದ ಬಿಎಂಟಿಸಿ ಚಾಲಕ ಕೆ. ಧನಪಾಲ್‌   

ಬೆಂಗಳೂರು:ಟಿಪ್ಪು ಕಾಲದ ಕನ್ನಡ ಶಿಲಾಶಾಸನವೊಂದು ಬೆಂಗಳೂರಿನ ಉತ್ತರ ತಾಲ್ಲೂಕಿನ ಕಾಳತಮ್ಮನಹಳ್ಳಿಯಲ್ಲಿ ಪತ್ತೆಯಾಗಿದೆ.

ಟಿಪ್ಪು ಸುಲ್ತಾನನ ಕಿಲ್ಲೇದಾರನಾಗಿದ್ದ ಬಹದ್ದೂರ್ ಖಾನನು ಹುತಾತ್ಮನಾದಾಗ, ನೀಡಲಾದ ದಾನ ಶಾಸನ ಇದಾಗಿದೆ. ಗ್ರಾಮದ ಅಶ್ವತ್ಥ ಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಹೂತುಹೋಗಿದ್ದ ಈ ಶಾಸನವನ್ನು ಇತಿಹಾಸ ಪ್ರೇಮಿಯೂ ಆದ ಬಿಎಂಟಿಸಿ ಚಾಲಕ ಕೆ.ಧನಪಾಲ್ ಅವರು ಶುಕ್ರವಾರ ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನ ಮೇಲೆ 1791ರ ಮಾರ್ಚ್‌ನಲ್ಲಿ ಬ್ರಿಟಿಷರು ಆಕ್ರಮಣ ಮಾಡಿದಾಗ 21 ದಿನಗಳ ಕಾಲ ಕೋಟೆಯನ್ನು ರಕ್ಷಿಸಿದ ಬಹದ್ದೂರ್‌ ಖಾನನು ಅಂತಿಮವಾಗಿ ಹುತಾತ್ಮನಾದ.ಹೀಗೆ ಹುತಾತ್ಮನಾದ ಬಹದ್ದೂರ್ ಖಾನನಿಗೆ ಕಾಳತಮ್ಮನಹಳ್ಳಿ ಗ್ರಾಮವನ್ನು 1791ರ ಮಾರ್ಚ್‌ 27ರಂದು ರಕ್ತಕೊಡುಗೆಯಾಗಿ (ಹುತಾತ್ಮನಿಗೆ ಕೊಡುವ ದಾನ) ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖಿತವಾಗಿದೆ ಎಂದು ಇತಿಹಾಸ ಉಪನ್ಯಾಸಕ ಎಚ್‌.ಜಿ.ರಾಜೇಶ್‌ ತಿಳಿಸಿದ್ದಾರೆ.

ADVERTISEMENT

ಈ ಶಿಲಾಶಾಸನದ ಪಾಠವನ್ನು ಶಾಸನ ತಜ್ಞರಾದ ಪ್ರೊ.ಕೆ.ಆರ್.ನರಸಿಂಹನ್ ಮತ್ತು ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಓದಿಕೊಟ್ಟಿದ್ದಾರೆ. ಧನಪಾಲ್ ಅವರ ಜೊತೆಗೆ ಶಾಸನವನ್ನು ಶೋಧಿಸಿದವರಲ್ಲಿ ಸಂಶೋಧನಾ ವಿದ್ಯಾರ್ಥಿ ಆರ್‌. ಯುವರಾಜ್ ಸಹ ಇದ್ದರು.ಶಾಸನವನ್ನು ಹೊರತೆಗೆಯಲು ಗ್ರಾಮಸ್ಥರಾದ ಜಯರಾಮಯ್ಯ, ನರಸಿಂಹಮೂರ್ತಿ, ನಾಗೇಶ್, ಶ್ರೀನಿವಾಸ್ ನೆರವಾದರೆಂದು ಧನಪಾಲ್ ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.