ಬೆಂಗಳೂರು: ಟಿಪ್ಪು ಜನ್ಮದಿನವನ್ನು ಕೋಮುಸೌಹಾರ್ದ ದಿನವನ್ನಾಗಿ ಆಚರಿಸಲು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ಒತ್ತಾಯಿಸಿದರು.
ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಬಳಿ ಸಂಘವು ಶುಕ್ರವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ 220ನೇ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.
'ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ಧೀರ ಟಿಪ್ಪು ಸುಲ್ತಾನ್. ಇಂಥ ಮಹಾತ್ಮರ ವಿರುದ್ಧ ಮೂಲಭೂತವಾದಿಗಳು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಕಿವಿಗೊಡದೆ ಸೌಹಾರ್ದದ ಸಂಕೇತವಾಗಿ ಕಾಣಬೇಕು’ ಎಂದು ಹೇಳಿದರು.
‘ನಾಸಾ ಮತ್ತು ಆಕ್ಸ್ಫರ್ಡ್ ಗ್ರಂಥಾಲಯಗಳಲ್ಲಿ ಟಿಪ್ಪು ಸಾಧನೆಗಳ ಕುರಿತು ಪುಸ್ತಕಗಳಿವೆ. ಟಿಪ್ಪು ಹೆಸರಿನಲ್ಲಿ ಹೊರ ದೇಶಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ. ದೇಶಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟಿದ್ದರು. ಟಿಪ್ಪು ಅನನ್ಯ ಸಾಧನೆಗಳ ಬಗ್ಗೆ ಇಂದಿನ ಮಕ್ಕಳಿಗೆ ವಿವರಿಸಬೇಕು’ ಎಂದರು.
ಶ್ರೀಕೋಟೆ ವೆಂಕಟರಮಣ ದೇವಸ್ಥಾನದ ಅರ್ಚಕ ಶ್ರೀರಂಗ ಭಟ್ ಅವರು ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.