ಬೆಂಗಳೂರು: ‘ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಸಮಿತಿಗೆ ಅವರ ವಂಶಸ್ಥರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ಟಿಪ್ಪು ವಂಶಸ್ಥರೆಂದು ಪ್ರತಿಪಾದಿಸುವ ಸಾಹಿಬ್ಜಾದ ಮನ್ಸೂರ್ ಅಲಿ ಖಾನ್ ಆಗ್ರಹಿಸಿದರು.
‘ಟಿಪ್ಪು ಸುಲ್ತಾನ್ ಸಮಾಧಿಯ ನಿರ್ವಹಣೆಯೂ ಸೇರಿದಂತೆ ಅವರ ಆಳ್ವಿಕೆಯಲ್ಲಿ ನಿರ್ಮಿಸಿಲಾದ ಸ್ಮಾರಕಗಳು, ಮಸೀದಿಗಳ ಸಂಪೂರ್ಣ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಟಿಪ್ಪು ಸುಲ್ತಾನ್ ವಂಶಸ್ಥರಿಗೆ ನೀಡಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ಮಾಡುತ್ತಿವೆ. ಟಿಪ್ಪು ಆಳ್ವಿಕೆಯಲ್ಲಿ ನಿರ್ಮಾಣವಾದ ಸ್ಮಾರಕ, ಮಸೀದಿ ಮತ್ತು ಐತಿಹಾಸಿಕ ಕಟ್ಟಡಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅವರಿಗೆ ಸಂಬಂಧಿಸಿದ ಎಲ್ಲಾ ಆಸ್ತಿಗಳ ನಿರ್ವಹಣೆಯನ್ನು ನಮಗೇ ನೀಡಬೇಕು’ ಎಂದು ಆಗ್ರಹಿಸಿದರು.
‘ಪ್ರತಿ ವರ್ಷ ನಡೆಯುವ ಟಿಪ್ಪು ಸುಲ್ತಾನ್ ಉರುಸ್ನಲ್ಲಿ ಮಾತ್ರವೇ ನಮಗೆ ನಿರ್ವಹಣೆಯ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆದರೆ, ಇಡೀ ವರ್ಷದ ನಿರ್ವಹಣೆಯನ್ನು ನಮಗೆ ನೀಡಬೇಕು. 45 ಜನ ಟಿಪ್ಪು ವಂಶಸ್ಥರು ಸದ್ಯ ಕೋಲ್ಕತ್ತಾದಲ್ಲಿ ವಾಸವಿದ್ದೇವೆ’ ಎಂದು ಮಾಹಿತಿ ನೀಡಿದರು.
ಟಿಪ್ಪು ಸುಲ್ತಾನ್ ವಂಶದ 7ನೇ ತಲೆಮಾರಿನ ಸಾಹಿಬ್ಜಾದೀ ರಹೀಮುನ್ನಿಸ್ಸಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.