ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆ ಮಾಡಿ ದಂಡ ವಿಧಿಸಿದರೆಂಬ ಕಾರಣಕ್ಕೆ ಅಶೋಕ ಗಜರೆ ಎಂಬಾತ ಕಾನ್ಸ್ಟೆಬಲ್ ಒಬ್ಬರ ಮನೆಗೆ ಹೋಗಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಆ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹೈಗ್ರೌಂಡ್ಸ್ ಠಾಣೆ ಕಾನ್ಸ್ಟೆಬಲ್ ಮುಸ್ತಫಾ ಮುಲ್ಲಾ ಎಂಬುವರು ನೀಡಿರುವ ದೂರು ಆಧರಿಸಿ ಅಶೋಕ ಗಜರೆ ವಿರುದ್ದ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಇದೇ 18ರಂದು ಕರ್ತವ್ಯ ಮುಗಿಸಿ ಮುಸ್ತಫಾ ಮನೆಗೆ ಹೋಗಿದ್ದರು. ಅದೇ ವೇಳೆ ಮನೆಯ ಹೊರಗಡೆ ಶಬ್ದ ಕೇಳಿಸಿತ್ತು. ಏನಾಯಿತು ಎಂದು ನೋಡಿದಾಗ, ಅಲ್ಲಿ ಅಶೋಕ ಗಜರೆ ನಿಂತಿದ್ದ.’
‘ಕಾನ್ಸ್ಟೆಬಲ್ ಅವರನ್ನು ನಿಂದಿಸಿದ್ದ ಆತ, ‘ನನಗೆ ದಂಡ ಹಾಕುತ್ತೀರಾ. ನಾನು ಯಾರು ಎಂಬುದನ್ನು ತೋರಿಸುತ್ತೇನೆ. ನಾಳೆ ಟಿ.ವಿ. ನೋಡಿ ’ ಎಂದು ಬೆದರಿಕೆಯೊಡ್ಡಿದ್ದ. ಕಾನ್ಸ್ಟೆಬಲ್ ಅವರ ಬೈಕ್ನಲ್ಲಿದ್ದ ಟ್ಯಾಬ್, ರೈನ್ ಕೋಟ್ ಹಾಗೂ ಮಾಸ್ಕ್ ಕದ್ದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.