ವಿಧಾನ ಸೌಧ
(ಸಾಂಕೇತಿಕ ಚಿತ್ರ)
ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಒಂದು ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂಬ ಮನವಿಗಳನ್ನು ಪರಿಗಣನೆಗೆ ತೆಗೆದುಕೊಂಡು ಆದೇಶ ಹೊರಡಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆೆಎಟಿ) ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.
ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಮೋಹನ್ ಕುಮಾರ್ ಸೇರಿದಂತೆ 52 ಡಿವೈಎಸ್ಪಿ, ಪೊಲೀಸ್ ಇನ್ಸ್ಪೆಕ್ಟರ್ಗಳು ಸಲ್ಲಿಸಿದ್ದ ಅರ್ಜಿಯನ್ನು ಜುಲೈ 30ರಂದು ವಿಲೇವಾರಿ ಮಾಡಿರುವ ಕೆೆಎಟಿಯ ನ್ಯಾಯಾಂಗ ಸದಸ್ಯ ಟಿ. ನಾರಾಯಣಸ್ವಾಮಿ ಮತ್ತು ಆಡಳಿತ ಸದಸ್ಯೆ ಅಮಿತಾ ಪ್ರಸಾದ್ ಅವರಿದ್ದ ಪೀಠ, ‘ಅರ್ಜಿದಾರರ ವರ್ಗಾವಣೆ ಪ್ರಸ್ತಾವ ಇದ್ದಲ್ಲಿ ಕನಿಷ್ಠ ಸೇವಾವಧಿಗೆ ಸಂಬಂಧಿಸಿದ ಅವರ ಮನವಿಗಳನ್ನು ಪರಿಗಣಿಸಬೇಕು’ ಎಂದು ಹೇಳಿದೆ.
ಪೊಲೀಸ್ ಇನ್ಸ್ಪೆಕ್ಟರ್ಗಳಿಂದ ಎಸ್ಪಿವರೆಗಿನ ಅಧಿಕಾರಗಳ ಕನಿಷ್ಠ ಸೇವಾವಧಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ‘ಕರ್ನಾಟಕ ಪೊಲೀಸು (ತಿದ್ದುಪಡಿ) ಕಾಯ್ದೆ–2024’ ಜಾರಿಯಲ್ಲಿದೆ. ಅದರ ಅನುಸಾರ, ತಾವು ಈಗ ಇರುವ ಹುದ್ದೆಗಳಲ್ಲಿ ಎರಡು ವರ್ಷದ ಸೇವಾ ಅವಧಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಸಿಬ್ಬಂದಿ ಮಂಡಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.
‘ವರ್ಗಾವಣೆಯ ಪ್ರಸ್ತಾವಗಳು ಇದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು, ಕನಿಷ್ಠ ಸೇವಾವಧಿಗೆ ಸಂಬಂಧಿಸಿದ ಮನವಿಗಳನ್ನು ಪರಿಗಣಿಸಿ, ಕಾನೂನಿನ ಅನುಸಾರ ನಿರ್ಧಾರ ಕೈಗೊಳ್ಳಬೇಕು’ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.