ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿನಗರ ಮೆಟ್ರೊ ನಿಲ್ದಾಣದ ಬಳಿ ಸುರಂಗ ಮಾರ್ಗ ಕಾಮಗಾರಿ ವೇಳೆ ಮಣ್ಣು ಕುಸಿದಿರುವುದರಿಂದ ಇಲ್ಲಿ ಕಾಮಗಾರಿ ಸುಮಾರು 15 ದಿನಗಳಷ್ಟು ವಿಳಂಬವಾಗಲಿದೆ.
‘ಸುರಂಗ ಮಾರ್ಗ ನಿರ್ಮಾಣ ವೇಳೆ ಮಣ್ಣು ಕುಸಿದು, ಸುಮಾರು 10 ಅಡಿ ಅಷ್ಟು ಆಳವಾದ ಗುಂಡಿ ಬಿದ್ದಿದೆ. ಆ ಸ್ಥಳವನ್ನು ಮಣ್ಣು, ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಗಟ್ಟಿ ಮಾಡಲಾಗಿದೆ. ಆ ಸ್ಥಳವಿನ್ನೂ ಹಸಿಯಾಗಿದ್ದು, ಸಂಪೂರ್ಣ ಒಣಗಲು ಎಂಟರಿಂದ ಹತ್ತು ದಿನಗಳು ಬೇಕಾಗಬಹುದು. ಗಟ್ಟಿಯಾದ ನಂತರ ಕಾಮಗಾರಿ ಮುಂದುವರಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಅವನಿ’ ಹತ್ತು ದಿನಗಳ ಹಿಂದೆ ಈ ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿತ್ತು.ನೆಲ ಮಟ್ಟದಿಂದ ಹತ್ತು ಅಡಿಗಳಿಗೂ ಹೆಚ್ಚು ಆಳದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಮಣ್ಣು ಕುಸಿದಿದೆ.
‘ನೆಲ ಸ್ಥಿರವಾಗಿಲ್ಲದಿದ್ದರೆ ಅದನ್ನು ಸಿಮೆಂಟ್ ಬಳಸಿ ಗಟ್ಟಿಮಾಡಿಕೊಂಡು ಕಾಮಗಾರಿ ನಡೆಸುವುದು ಅನಿವಾರ್ಯ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.