ADVERTISEMENT

ಆಟೊ ಚಾಲಕನ ಕೊಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 9:19 IST
Last Updated 1 ಮಾರ್ಚ್ 2020, 9:19 IST
ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್    

ಬೆಂಗಳೂರು: ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯ ಶಾಂಪುರ ರೈಲ್ವೆ ಗೇಟ್ ಬಳಿ ಫೆ. 26ರಂದು ನಡೆದ ಆಟೊ ಚಾಲಕ ವಿನೋದ್ (32) ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ವಿಶಾಖಪಟ್ಟಣದ ಜೈರಾಜ್ ಮತ್ತು ನಾರಾಯಣಗೌಡ ಬಂಧಿತರು.‌ ಪ್ರಕರಣದಲ್ಲಿ ಮೃತ ವಿನೋದ್‌ನ ಪತ್ನಿ ಅನಿತಾಳ ಪಾತ್ರದ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

ಅನಿತಾಳನ್ನು 12 ವರ್ಷಗಳ ಹಿಂದೆ ವಿನೋದ್‌ ಮದುವೆಯಾಗಿದ್ದ. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು. ಈ ಕಾರಣಕ್ಕೆ ಪತಿಯನ್ನು ತೊರೆದು ತವರು ಸೇರಿದ್ದ ಅನಿತಾ, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಪರಿಚಯವಾಗಿದ್ದ ನಾರಾಯಣಗೌಡನ ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ವಿನೋದ್‌ ದೂರು ನೀಡಿದ್ದ.

ADVERTISEMENT

ಚೂರಿ ಇರಿತ: ಇಬ್ಬರ ಬಂಧನ

ಫುಡ್ ಆರ್ಡರ್ ಮಾಡುವ ವಿಷಯಕ್ಕೆ ನಡೆದ ಜಗಳ ಸಂಬಂಧಯುವಕನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಹಲ್ಲೆ ನಡೆಸಿದ ಇಬ್ಬರು ಡೆಲಿವರಿ ಬಾಯ್‌ಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ತೇಜಸ್ ಮತ್ತು ಪ್ರವೀಣ್ ಬಂಧಿತರು. ಎಂ.ಎಸ್. ಪಾಳ್ಯದ ನಿವಾಸಿ ಸುನೀಲ್ ಹಲ್ಲೆಗೆ ಒಳಗಾದ
ಯುವಕ. ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಟಿಎಂ ಲೇಔಟ್‌ನ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ (ಪಿಜಿ) ಸುನೀಲ್ ನೆಲೆಸಿದ್ದಾನೆ. ಶುಕ್ರವಾರ (ಫೆ.28) ರಾತ್ರಿ ಸ್ನೇಹಿತರ ನಡುವೆ ಫುಡ್ ಆರ್ಡರ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಬಳಿಕ ತೇಜಸ್ ಮತ್ತು ಪ್ರವೀಣ್ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುನೀಲ್, ಬಿಟಿಎಂ ಲೇಔಟ್‌ನ ಒಂದನೇ ಕ್ರಾಸ್‌ನಲ್ಲಿ ರಸ್ತೆ ಬದಿ ಬಿದ್ದಿದ್ದ.

ನಸುಕಿನ 5 ಗಂಟೆ ಸುಮಾರಿಗೆ ಸುನೀಲ್‌ನ ಸ್ನೇಹಿತ ನಾಗರಾಜ್ ಎಂಬಾತ ಫುಡ್ ಡೆಲಿವರಿ ಮಾಡಿ ಪಿಜಿ ಕಟ್ಟಡಕ್ಕೆ ಮರಳುತ್ತಿದ್ದಾಗ ಜನರು ಗುಂಪು ಸೇರಿದ್ದರು. ಅಲ್ಲಿಗೆ ಹೋಗಿ ನೋಡಿದಾಗ ಗಾಯಗೊಂಡು ಬಿದ್ದಿದ್ದ ವ್ಯಕ್ತಿ ಸ್ನೇಹಿತ ಸುನೀಲ್ ಎಂದು ಗೊತ್ತಾಗಿದೆ. ಅಲ್ಲದೆ, ಆತನಿಗೆ ಗಂಭೀರ ಗಾಯಗಳಾಗಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.