ADVERTISEMENT

‘ಚಿಲುಮೆ’ ಮುಖ್ಯಸ್ಥ ರವಿ ಆಪ್ತರ ಬಂಧನ

ಬೆಳಗಾವಿಯಲ್ಲಿ ಸೆರೆಸಿಕ್ಕ ಅಭಿಷೇಕ್‌* ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:30 IST
Last Updated 30 ನವೆಂಬರ್ 2022, 20:30 IST
   

ಬೆಂಗಳೂರು: ‘ಚಿಲುಮೆ’ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ, ಬಂಧಿತ ಆರೋಪಿ ರವಿಕುಮಾರ್ ಆಪ್ತರಾದ ಅಭಿಷೇಕ್‌ ಹಾಗೂ ಮಾರುತಿಗೌಡ ಅವರನ್ನು ಹಲಸೂರು ಗೇಟ್‌ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘ರವಿಕುಮಾರ್‌ ಅವರಿಗೆ ಮಾರುತಿ ಆತ್ಮೀಯರಾಗಿದ್ದರು. ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಮಾರುತಿಯೇ ರವಿಕುಮಾರ್‌ ಅವರನ್ನು ಪರಿಚಯಿಸಿಕೊಟ್ಟಿದ್ದರು. ವಿಚಾರಣೆ ವೇಳೆ ರವಿ ನೀಡಿದ ಮಾಹಿತಿಯಂತೆ ಮಾರುತಿ ಅವರನ್ನು ಎರಡು ದಿನ ವಿಚಾರಣೆ ನಡೆಸಲಾಗಿತ್ತು. ಮಾರುತಿ ಸಹ ಮತದಾರರ ಸಮೀಕ್ಷೆಯ ಅಕ್ರಮದಲ್ಲಿ ಶಾಮೀಲಾಗಿದ್ದು, ಅವರನ್ನು ಬಂಧಿಸಲಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಮಾರುತಿ ಮನೆಯಲ್ಲಿ ಶೋಧ ನಡೆಸಿದ್ದು, ಸಂಸ್ಥೆಗೆ ಸೇರಿದ್ದ ಎರಡು ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ದಾಖಲೆಗಳು ಲಭಿಸಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ತಲೆಮರೆಸಿಕೊಂಡಿದ್ದ ಅಭಿಷೇಕ್‌ನನ್ನು ಬೆಳಗಾವಿಯಲ್ಲಿ ಬಂಧಿಸಲಾಯಿತು. ಅಭಿಷೇಕ್‌ ಎಲ್ಲ ವಲಯಗಳ ಕಂದಾಯ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದರು. ಸಮೀಕ್ಷೆ, ಹಣಕಾಸು ವ್ಯವಹಾರದಲ್ಲಿ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಮತ್ತಷ್ಟು ವಲಯಗಳ ಅಧಿಕಾರಿಗಳನ್ನು ಬುಧವಾರವೂ ವಿಚಾರಣೆ ನಡೆಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದಲ್ಲಿ ‘ಚಿಲುಮೆ’ ಸಂಸ್ಥೆಗೆ ಸಹಾಯ ಮಾಡಿದ್ದ ಹಾಗೂ ಸಂಸ್ಥೆಯೊಂದಿಗೆ ಸೇರಿಕೊಂಡು ಅಕ್ರಮ ಎಸಗಿದ್ದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 15ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.