ADVERTISEMENT

ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 12:16 IST
Last Updated 8 ಅಕ್ಟೋಬರ್ 2020, 12:16 IST
ಬಂಧಿತ ಉಗ್ರರು
ಬಂಧಿತ ಉಗ್ರರು   

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಜೊತೆ ಒಡನಾಟವಿಟ್ಟುಕೊಂಡಿದ್ದ ಇಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದು, ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಫ್ರೇಜರ್‌ ಟೌನ್‌ ನಿವಾಸಿ ಇರ್ಫಾನ್ ನಾಸೀರ್ ಸತ್ತಾರ್ (33) ಹಾಗೂ ತಮಿಳಿನಾಡಿನ ರಾಮನಾಥಪುರದ ಅಹಮ್ಮದ್ ಅಬ್ದುಲ್ ಖಾದೆರ್ (40) ಬಂಧಿತರು.

ಆರೋಪಿ ಇರ್ಫಾನ್, ಅಕ್ಕಿ ವ್ಯಾಪಾರಿ ಆಗಿದ್ದ. ಅಬ್ದುಲ್ ಖಾದೆರ್, ಚೆನ್ನೈನ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ನಗರದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಬ್ದುಲ್ ರಹಮಾನ್ ಎಂಬಾತನನ್ನು ಬಸವನಗುಡಿಯಲ್ಲಿ ಎನ್‌ಐಎ ಬಂಧಿಸಿತ್ತು. ಆತ ನೀಡಿದ್ದ ಮಾಹಿತಿಯಂತೆ ಗುರಪ್ಪನಪಾಳ್ಯ ಹಾಗೂ ಫ್ರೇಜರ್‌ಟೌನ್‌ನಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಇಬ್ಬರೂ ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮಾಹಿತಿ ಇದೆ. ಇಬ್ಬರ ಮನೆಯಲ್ಲೂ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದರು.

2013-14ರಲ್ಲಿ ಸಿರಿಯಾಗೆ ಹೋಗಿ ಬಂದಿದ್ದ ಶಂಕಿತರ ಉಗ್ರರು, ‘ಕುರಾನ್ ಸರ್ಕಲ್’ ಎಂಬ ಗುಂಪು ಕಟ್ಟಿಕೊಂಡಿದ್ದರು. ಅದರ ಮೂಲಕವೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಸಿಎಎ ಪ್ರತಿಭಟನೆ ವೇಳೆಯೂ ದೆಹಲಿಯಲ್ಲಿ ಸ್ಫೋಟ ಮಾಡಲು ಸಂಚು ರೂಪಿಸಿ ವಿಫಲರಾಗಿದ್ದರು. ಮುಸ್ಲಿಂ ಯುವಕರನ್ನು ಸೆಳೆದು ಐಎಸ್‌ಗೆ ಸೇರಿಸುವ ಕೆಲಸವನ್ನೂ ಇದೇ ಶಂಕಿತ ಉಗ್ರರು ಮಾಡುತ್ತಿದ್ದರೆಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.