
ಕೆ.ಆರ್.ಪುರ: ಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ಹಿಂದಿನಿಂದ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರ ಠಾಣೆ ವ್ಯಾಪ್ತಿಯ ಕಿತ್ತಗನೂರಿನ ಹಳೆಹಳ್ಳಿಯಲ್ಲಿ ನಡೆದಿದೆ.
ತ್ರಿಶೂಲ್ ಮೃತ ಮಗು.
ಸಂಬಂಧಿಕರೊಂದಿಗೆ ಮಾರಗೊಂಡನಹಳ್ಳಿಯ ಶಿವನ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ದ್ವಿಚಕ್ರ ವಾಹನದಲ್ಲಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ.
ಹಿಂದಿನಿಂದ ಬಂದ ಇನೊವಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಕೆಳಗಡೆ ಬಿದ್ದಿದೆ. ಈ ವೇಳೆ ರಸ್ತೆ ಮೇಲೆ ಮಗು ಬಿದ್ದಿತ್ತು. ಆಗ ಕಾರಿನ ಚಕ್ರಗಳು ಮಗುವಿನ ಮೇಲೆ ಹರಿದಿವೆ.
ಚಿಕ್ಕಬಳ್ಳಾಪುರದ ಹರೀಶ್ ಹಾಗೂ ಅನು ದಂಪತಿ ಪುತ್ರ ತ್ರಿಶೂಲ್. ದಂಪತಿ ಮಹಾರಾಷ್ಟ್ರದ ಉಜ್ಜೈನಿಗೆ ಪ್ರವಾಸಕ್ಕೆ ತೆರಳುವ ನಿಮಿತ್ತ ಮಗುವನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ತೆರಳಿದ್ದರು.
ಅಪಘಾತದ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕೆ.ಆರ್.ಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತ ಸಂಭವಿಸಲು ರಸ್ತೆ ದುಃಸ್ಥಿತಿಯೇ ಕಾರಣ ಎಂದು ಸ್ಥಳೀಯ ನಿವಾಸಿಗಳು ಹಳೇಹಳ್ಳಿಯಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕಿತ್ತಗನೂರು ಪಂಚಾಯತಿ ಕಾರ್ಯದರ್ಶಿ ಸ್ಥಳಕ್ಕೆ ಬಂದು ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.