ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಕೈಗೊಳ್ಳುವ ಭೂಗತ (ಯುಜಿ) ಕೇಬಲ್ ಕಾಮಗಾರಿಯ ನೈಜ ಸಮಯದ ಮಾಹಿತಿ ಪಡೆಯುವುದಕ್ಕಾಗಿ ಅಭಿವೃದ್ಧಿಪಡಿಸಿರುವ ‘ಜಿಐಎಸ್ ಮ್ಯಾಪಿಂಗ್’ ಮೊಬೈಲ್ ಅಪ್ಲಿಕೇಶನ್ ಅನ್ನು ಶನಿವಾರ ಬಿಡುಗಡೆ ಮಾಡಲಾಯಿತು.
ಭೌಗೋಳಿಕ ಮಾಹಿತಿ ವ್ಯವಸ್ಥೆ(ಜಿಐಎಸ್) ಜತೆಗೆ ಸಂಯೋಜಿಸಲಾದ ಈ ಮ್ಯಾಪಿಂಗ್ ಅಪ್ಲಿಕೇಷನ್ ರಾಜ್ಯದಾದ್ಯಂತ ನಡೆಯುವ ಭೂಗತ ಕೇಬಲ್ ಕಾಮಗಾರಿಗಳ ನೈಜ ಸಮಯದ ಮಾಹಿತಿ ಒದಗಿಸಲಿದೆ. ಸಾರ್ವಜನಿಕರು ಈ ಅಪ್ಲಿಕೇಷನ್ನಲ್ಲಿ ಲಭ್ಯವಾಗುವ ಮಾಹಿತಿ ಆಧರಿಸಿ ತಮ್ಮ ದೈನಂದಿನ ಮತ್ತು ದೀರ್ಘಕಾಲದ ಚಟುವಟಿಕೆಗಳಿಗೆ ಸಮಯ ಹೊಂದಾಣಿಕೆ ಮಾಡಿಕೊಳ್ಳಬಹುದು. ಕಾಮಗಾರಿಗಳ ಕುರಿತು ಈ ಅಪ್ಲೀಕೇಷನ್ ಪೂರ್ವಭಾವಿ ಮಾಹಿತಿ ಒದಗಿಸುವುದರಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲಗಳು ಕಡಿಮೆಯಾಗಲಿದೆ.
ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ‘ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿದೆ. ಅದರ ಭಾಗವಾಗಿ ಈ ‘ಜಿಐಎಸ್ ಮ್ಯಾಪಿಂಗ್’ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ' ಎಂದರು.
‘ಜಿಐಎಸ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಿರುವ ಈ ಅಪ್ಲೀಕೇಷನ್ನಿಂದ, ಆಂತರಿಕ ದಕ್ಷತೆ ಸುಧಾರಿಸುವುದರ ಜತೆಗೆ ಸಾರ್ವಜನಿಕವಾಗಿ ಪಾರದರ್ಶಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ತಾಂತ್ರಿಕ ವ್ಯವಸ್ಥೆಯು ಕೆಪಿಟಿಸಿಎಲ್ನ ಜಾಲವನ್ನು ಆಧುನೀಕರಿಸುವ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸೇವೆಯನ್ನು ಸುಧಾರಿಸುವ ಕಾರ್ಯತಂತ್ರದ ಭಾಗವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಕೆಪಿಟಿಸಿಎಲ್ ಯೋಜನೆಗಳು ವಿಭಾಗದ ನಿರ್ದೇಶಕರಾದ ಎಸ್.ವಿ.ಮಂಜುನಾಥ್, ಮಾಹಿತಿ ತಂತ್ರಜ್ಞಾನ ವಿಭಾಗದ ಸೂಪರಿಂಟೆಂಡ್ ಎಂಜಿನಿಯರ್ ಅನಿಲ್ ಡಿ'ಸೋಜಾ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.