ಬೆಂಗಳೂರು: ‘ರಾಜ್ಯಪಾಲರ ಬೆಂಗಾವಲು ವಾಹನಗಳಿಗೆ ದಾರಿ ಮಾಡಿಕೊಡಲು ಸಂಚಾರ ಬಂದ್ ಮಾಡಿದ್ದರಿಂದ ಜಗಳ ತೆಗೆದ ಮೂವರು, ನನ್ನ ಮರ್ಮಾಂಗಕ್ಕೆ ಹಲ್ಲೆ ಮಾಡಿ ಸಮವಸ್ತ್ರ ಹರಿದು ಹಾಕಿದರು’ ಎಂದು ಆರೋಪಿಸಿ ಕಬ್ಬನ್ಪಾರ್ಕ್ ಸಂಚಾರ ಠಾಣೆಯ ಕಾನ್ಸ್ಟೆಬಲ್ ಚಿದಾನಂದ ಪಾಟೀಲ ಅವರು ವಿಧಾನಸೌಧ ಠಾಣೆಗೆ ದೂರು ಕೊಟ್ಟಿದ್ದಾರೆ.
‘ನ.14ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೈಕೋರ್ಟ್ ಸಮೀಪದ ಪೋಸ್ಟ್ ಆಫೀಸ್ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದೆ. ರಾಜ್ಯಪಾಲರ ವಾಹನ ಬರುತ್ತಿರುವುದಾಗಿ ಸಂದೇಶ ಬಂದಿದ್ದರಿಂದ, ಕೇಂದ್ರ ಗ್ರಂಥಾಲಯದ ಕಡೆಯಿಂದ ಬರುತ್ತಿದ್ದ ವಾಹನಗಳ ಸಂಚಾರ ಕೆಲ ಕಾಲ ಬಂದ್ ಮಾಡಿದೆ. ಆಗ ವೇಗವಾಗಿ ಬಂದ ಟಾಟಾ ಇಂಡಿಗೊ ಕಾರು ನನಗೆ ಡಿಕ್ಕಿ ಹೊಡೆಯಿತು. ಚಾಲಕ ರಭಸವಾಗಿ ಬಾಗಿಲು ತೆಗೆದಾಗ ನನ್ನ ಮರ್ಮಾಂಗಕ್ಕೆ ಪೆಟ್ಟಾಯಿತು. ಕಾರಿನಿಂದ ಇಳಿದ ಇನ್ನಿಬ್ಬರು, ಎಳೆದಾಡಿ ಬಟ್ಟೆ ಹರಿದರು. ಎದೆಗೆ ಒದ್ದು ಹೊರಟು ಹೋದರು’ ಎಂದು ಅವರು ದೂರಿದ್ದಾರೆ.
‘ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಮಹಾರಾಷ್ಟ್ರದ ವಾಹನವಾಗಿದ್ದು, ಅದರಲ್ಲಿ ಒಬ್ಬರು ವಕೀಲರಿದ್ದುದು ಗೊತ್ತಾಗಿದೆ. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.