ಬೆಂಗಳೂರು:ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ಲೊಯೊಲಾ ಮತ್ತು ಇತರ ಕಾಲೇಜುಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಬೆಂಗಳೂರಿನ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ಯ ವಿದ್ಯಾರ್ಥಿನಿ ಉನ್ನತಿ ಆಶೀಶ್ ಘಿಯಾ ಅವರು ವಿಜಯಿಯಾಗಿದ್ದಾರೆ.
‘ಅಮೆರಿಕ- ಭಾರತ ಸಂವಿಧಾನಾತ್ಮಕ ಕಾನೂನಿನ ತುಲನಾತ್ಮಕ ಚರ್ಚೆ’ ಸ್ಪರ್ಧೆಯ ಅಂತಿಮ ಸುತ್ತು ಶನಿವಾರ ಚೆನ್ನೈನಲ್ಲಿ ನಡೆದಿದ್ದು ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ 16 ಸ್ಪರ್ಧಿಗಳು ಭಾಗವಹಿಸಿದ್ದರು.
ಅಮೆರಿಕ ರಾಯಭಾರಿ ರಾಬರ್ಟ್ ಜಿ. ಬರ್ಗೆಸ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಚೆನ್ನೈನ ತಾಜ್ ಕೋರಮಂಡಲ್ನಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಮತ್ತು ಭಾರತದ ನಡುವೆ ಗಾಢವಾದ ಸಂಬಂಧವಿದೆ. ದಕ್ಷಿಣ ಭಾರತದಲ್ಲಿ ವಿವಿಧ ಸಹಭಾಗಿಗಳ ಜತೆಗೂಡಿ ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಚಿಂತನೆಗೆ ಹಚ್ಚುವ ‘ಅಮೆರಿಕ- ಭಾರತ ಸಂವಿಧಾನಾತ್ಮಕ ಕಾನೂನಿನ ತುಲನಾತ್ಮಕ ಚರ್ಚಾ ಸ್ಪರ್ಧೆ’ಯನ್ನು ಆಯೋಜಿಸಿರುವುದು ಸಂತಸ ತಂದಿದೆ. ಈ ದಿನದ ಚರ್ಚೆಗಳು ನನಗೆ ಸ್ಫೂರ್ತಿ ನೀಡಿವೆ. ಭಾರತದ ಈ ಭಾವಿ ಪ್ರತಿನಿಧಿಗಳಿಂದ ನಾನು ಪ್ರಭಾವಿತನಾಗಿದ್ದೇನೆ’ ಎಂದು ರಾಬರ್ಟ್ ಜಿ. ಬರ್ಗೆಸ್ ಹೇಳಿದರು.
ವಿದ್ಯಾರ್ಥಿಗಳಿಗೆ ಅಪಾರ ಅನುಭವ ನೀಡಿದ ಇಂತಹದ್ದೊಂದು ಚರ್ಚಾಸ್ಪರ್ಧೆಯನ್ನು ಆಯೋಜಿಸಿದ ಅಮೆರಿಕ ರಾಯಭಾರ ಕಚೇರಿಯ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ನಾನು ವಿದ್ಯಾರ್ಥಿಯಾಗಿದ್ದಾಗ ಇಂತಹ ಅವಕಾಶಗಳು ನಮಗೂ ದೊರೆತಿದ್ದರೆ ಚೆನ್ನಾಗಿತ್ತು ಎಂದು ಈಗ ಅನಿಸುತ್ತಿದೆ ಎಂದು ತೀರ್ಪುಗಾರರಲ್ಲೊಬ್ಬರಾದ, ಮುಂಬೈ ಹೈಕೋರ್ಟ್ನ ಹಿರಿಯ ವಕೀಲ ಡಾ. ಅಭಿನವ್ ಚಂದ್ರಚೂಡ್ ಹೇಳಿದರು.
ದಕ್ಷಿಣ ಭಾರತದಾದ್ಯಂತ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೊಚ್ಚಿ, ಬೆಂಗಳೂರು, ತಿರುಚಿನಾಪಳ್ಳಿ, ಮತ್ತು ಚೆನ್ನೈನಲ್ಲಿ ನಡೆದ ಪ್ರಾಥಮಿಕ ಚರ್ಚಾ ಸ್ಪರ್ಧೆಯಲ್ಲಿ ಸುಮಾರು 270 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತಿ ರಾಜ್ಯದ ಅತ್ಯುತ್ತಮ ನಾಲ್ಕು ಸ್ಪರ್ಧಿಗಳು ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ, ಲೊಯೊಲಾ ಕಾಲೇಜು,ಕೊಚ್ಚಿಯ ‘ದಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್’, ಬೆಂಗಳೂರಿನಲ್ಲಿ ‘ದಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’, ತಿರುಚಿನಾಪಳ್ಳಿಯಲ್ಲಿನ ‘ದಿ ತಮಿಳುನಾಡು ನ್ಯಾಷನಲ್ ಲಾ ಯೂನಿವರ್ಸಿಟಿ’ ಮತ್ತು ಚೆನ್ನೈನಲ್ಲಿನ ‘ದಿ ತಮಿಳುನಾಡಿ ಡಾ. ಅಂಬೇಡ್ಕರ್ ಲಾಕಾಲೇಜು’ ಇವುಗಳ ಸಹಭಾಗಿತ್ವದಲ್ಲಿ ಚರ್ಚಾಸ್ಪರ್ಧೆ ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.