ಬೆಂಗಳೂರು: ‘ಕನ್ನಡ ಸಾಹಿತ್ಯದಲ್ಲಿ ದಲಿತ ಬಂಡಾಯ ಪ್ರಕಾರ ಇದೆ. ಆದರೆ ತೆಲುಗು ಭಾಷೆಯಲ್ಲಿ ಬಹುಜನ ಸಾಹಿತ್ಯ ಪ್ರಕಾರ ಹೊಸ ಅಲೆಯನ್ನು ಸೃಷ್ಟಿಸಿದೆ. ಕನ್ನಡದಲ್ಲಿ ಈ ರೀತಿಯ ಬರವಣಿಗೆ ಕಾಣುವುದು ವಚನ ಪರಂಪರೆಯಲ್ಲಿ ಮಾತ್ರ’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ತೆಲುಗು ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ‘ತೆಲುಗು–ಕನ್ನಡ ಬಹುಜನ ಸಾಹಿತ್ಯ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಸಾಹಿತಿಗಳಾದ ಲಂಕೇಶ್, ಯು.ಆರ್.ಅನಂತಮೂರ್ತಿ ಅವರೊಂದಿಗೆ ಸೇರಿಕೊಂಡು ‘ಜಾಗೃತ ಕನ್ನಡ ಸಾಹಿತ್ಯ’ವನ್ನು ಹುಟ್ಟುಹಾಕಲು ಪ್ರಯತ್ನ ಮಾಡಿದೆವು. ಆದರೆ ಅಂದಿನಿಂದ ಇವತ್ತಿನವರೆಗೂ ಸಾಹಿತ್ಯದ ಗತಿ ಬದಲಾಗಲೇ ಇಲ್ಲ. ಕನ್ನಡದಲ್ಲೂ ಬಹುಜನ ಸಾಹಿತ್ಯ ಪ್ರಕಾರ ಬೆಳೆದರೆ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದು’ ಎಂದರು.
‘ವಚನ ಸಾಹಿತ್ಯದಲ್ಲಿ ಜಾತಿ, ಧರ್ಮ, ಮೇಲು–ಕೀಳುಗಳ ವಿರುದ್ಧ ಧ್ವನಿ ಎತ್ತಲಾಗಿದೆ. ಆದರೆ ಆ ನಂತರ ಅದು ಹೆಚ್ಚು ಗಮನಸೆಳೆದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಧುನಿಕ ಬರಹಗಳು ಕೆಲವೊಮ್ಮೆ ಇಣುಕಿ ಮರೆಯಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಬಿ.ಕೆ.ರವಿ, ‘ಕನ್ನಡದಲ್ಲಿ ಬಹುಜನ ಸಾಹಿತ್ಯಿಕ ಚಿಂತನೆ ಇಲ್ಲದಿರುವುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತೆಲುಗು ಪತ್ರಿಕೆಗಳ ಪ್ರಸಾರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.