ಬೆಂಗಳೂರು: ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಮನೆ ಹಾಗೂ ದೇಗುಲಗಳಲ್ಲಿ ಹಬ್ಬದ ಸಡಗರ ಕಂಡುಬಂತು.
ವರಮಹಾಲಕ್ಷ್ಮಿ ಹಬ್ಬವು ಶ್ರಾವಣದ ತಿಂಗಳಲ್ಲಿ ಬರುವ ಪ್ರಮುಖ ಹಬ್ಬವಾಗಿದ್ದು, ಭಕ್ತರು ಲಕ್ಷ್ಮೀದೇವಿಯನ್ನು ಆರಾಧಿಸಿದರು. ಸಮೃದ್ಧಿ, ಸುಖ–ಶಾಂತಿ ಹಾಗೂ ಆರೋಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.
ಲಕ್ಷ್ಮೀದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬಗೆಬಗೆಯ ಪುಷ್ಪಗಳು ಹಾಗೂ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದ ನಡುವೆ ದೇವಿ ಕಂಗೊಳಿಸಿದಳು. ಹೂವು, ಹಣ್ಣುಗಳಿಂದ ಸಂಪತ್ತಿನ ಅಧಿದೇವತೆಯನ್ನು ಆರಾಧಿಸಲಾಯಿತು.
ಲಕ್ಷ್ಮಿಯ ಮುಖವಾಡದಿಂದ ಅಲಂಕೃತವಾದ ಕಳಸಕ್ಕೆ ಸೀರೆಯನ್ನು ತೊಡಿಸಿ, ಆಭರಣಗಳಿಂದ ಶೃಂಗಾರ ಮಾಡಲಾಗಿತ್ತು. ಫಲ, ಪುಷ್ಪ, ಧನಕನಕಗಳಿಂದ ಮಹಾಲಕ್ಷ್ಮಿಗೆ ಮೆರುಗು ನೀಡಲಾಯಿತು. ಮನೆಯ ಎದುರಿನ ಅಂಗಳದಲ್ಲೂ ರಂಗೋಲಿಯ ಚಿತ್ತಾರ ಮೂಡಿತ್ತು. ಮನೆಗೆ ಬಂದ ಮಹಿಳೆಯರಿಗೆ ಅರಿಶಿನ ಕುಂಕುಮ, ಹೂವು ನೀಡಲಾಯಿತು.
ಶೇಷಾದ್ರಿಪುರ ಮತ್ತು ಮಹಾಲಕ್ಷ್ಮಿ ಲೇಔಟ್ನ ಲಕ್ಷ್ಮಿ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ದೇವಾಲಯಗಳಲ್ಲಿ ಮಹಿಳಾ ಭಕ್ತರಿಗೆ ಅರಿಶಿನ–ಕುಂಕುಮ ಹಾಗೂ ಹಸಿರು ಬಳೆ ವಿತರಣೆ ಮಾಡಲಾಯಿತು.
ಮಲ್ಲೇಶ್ವರ, ಮಹಾಲಕ್ಷ್ಮಿಲೇಔಟ್, ಜಾಲಹಳ್ಳಿ, ವಿಜಯನಗರ, ಬಸವನಗುಡಿ, ಬನಶಂಕರಿ, ಅಶೋಕನಗರ ಶ್ರೀರಾಮಪುರ, ಕೆಂಗೇರಿ, ಸುಂಕದಕಟ್ಟೆ, ಜೆ.ಪಿ.ನಗರ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಸದಾಶಿವನಗರ, ದೀಪಾಂಜಲಿ ನಗರ, ವಿವಿ ಪುರಂ, ಪುಟ್ಟೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಮಡಿವಾಳ, ಇಂದಿರಾನಗರ, ವಿದ್ಯಾರಣ್ಯಪುರ, ಎಚ್ಎಂಟಿ ಲೇಔಟ್, ಸಹಕಾರ ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ, ಸುಬ್ರಹ್ಮಣ್ಯ ನಗರ, ಹೊಸಕೆರೆಹಳ್ಳಿ, ಬ್ಯಾಟರಾಯನಪುರ ಸೇರಿದಂತೆ ನಗರದ ವಿವಿಧೆಡೆ ಹಬ್ಬದ ಸಂಭ್ರಮ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.