ADVERTISEMENT

ವರ್ತೂರು ಕೆರೆ: ತೂಬು ಗೇಟ್‌ಗೆ ಗಡುವು!

ಒಡ್ಡು ನಿರ್ಮಾಣ ಆಮೆಗತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 19:28 IST
Last Updated 15 ಜನವರಿ 2019, 19:28 IST
ವರ್ತೂರು ಕೆರೆಯಲ್ಲಿರುವ ಹೊಡ್ಡು.
ವರ್ತೂರು ಕೆರೆಯಲ್ಲಿರುವ ಹೊಡ್ಡು.   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವರ್ತೂರು ಕೆರೆಯಲ್ಲಿ ನಿರ್ಮಿಸುತ್ತಿರುವ ‘ತೂಬು ಗೇಟ್‌’ ಕಾಮಗಾರಿ ಹಲವು ಗಡುವುಗಳ ಬಳಿಕವೂ ಪೂರ್ಣಗೊಂಡಿಲ್ಲ. ಇದೀಗ ಮತ್ತೊಂದು ಗಡುವನ್ನು ವಿಧಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿಯೇ ಇದುಮುಗಿಯಬೇಕಿತ್ತು. ಈಗ ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಬಿಡಿಎ ಅಧಿಕಾರಿಗಳು ಯೋಜಿಸಿದ್ದಾರೆ. ಬಿಡಿಎ ಕೆರೆಯಲ್ಲಿ ತೂಬು ಗೇಟ್‌ಗಳನ್ನು ಅಳವಡಿಸಿದೆ. ಅವು ಕಾರ್ಯ ನಿರ್ವಹಿಸುತ್ತಿವೆ. ಆದರೆ20 ಮೀಟರ್ ಉದ್ದದ ಒಡ್ಡು ಇನ್ನಷ್ಟೇ ನಿರ್ಮಾಣವಾಗಬೇಕಿದೆ.

‘ಗುತ್ತಿಗೆ ಪಡೆದವರಿಗೆ ಅನುದಾನ ಬಿಡುಗಡೆಯಾಗದೆ . ತಿಂಗಳಿನಿಂದ ತೂಬು ಗೇಟ್‌ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ವರ್ತೂರು ನಿವಾಸಿಗಳು ಹೇಳುತ್ತಾರೆ.

ADVERTISEMENT

‘ಗುತ್ತಿಗೆದಾರರಿಂದ ಯಾವುದೇ ನಿರ್ದೇಶನ ಬಂದಿಲ್ಲ. ಬಂದರೆ ಕೆಲಸ ಪ್ರಾರಂಭಿಸುತ್ತೇವೆ’ ಎಂದು ಕಾರ್ಮಿಕರು ತಿಳಿಸುತ್ತಾರೆ.

ಬೆಳ್ಳಂದೂರಲ್ಲೂ ಗ್ರಹಣ!: ಬೆಳ್ಳಂದೂರು ಕೆರೆಯಲ್ಲಿಯೂ ಬಿಡಿಎ ತೂಬುಗೇಟ್‌ ನಿರ್ಮಿಸುತ್ತಿದೆ. ಈ ಕೆರೆಯ ವರ್ತೂರು ಕೋಡಿ ಕಡೆಯ ಗೇಟ್‌ನ ಕೆಲಸ ಪೂರ್ಣಗೊಂಡಿದೆ. ಯಮಲೂರು ಕೋಡಿ ಕಡೆ ಕೆಲ ಬಾಕಿ ಇದೆ.

‘ಯೋಜನೆಗೆ ಅನುದಾನದ ಕೊರತೆ ಇಲ್ಲ. ಗುತ್ತಿಗೆದಾರರ ಜತೆಗಿನ ಆಂತರಿಕ ಸಮಸ್ಯೆಗಳ ಕಾರಣಕ್ಕೆ ಕಾಮಗಾರಿ ವಿಳಂಬವಾಗುತ್ತಿದೆ. ವರ್ತೂರು ಕೆರೆಯ ಒಡ್ಡಿನ ಕೆಲಸ ಏಪ್ರಿಲ್‌ ತಿಂಗಳಲ್ಲಿ ಮುಗಿಯುತ್ತದೆ. ಬೆಳ್ಳಂದೂರು ಕೆರೆಯ ಯೋಜನೆ ಪೂರ್ಣಗೊಳ್ಳಲು ಸಮಯ ಬೇಕಾಗುತ್ತದೆ’ ಎಂದು ಬಿಡಿಎ ಎಂಜಿನಿಯರ್‌ ಬಿ.ಎ.ಶಿವಾನಂದ ತಿಳಿಸಿದರು.

‘ಕೆರೆಯ ಸುತ್ತ ಬೇಲಿ ಹಾಕುವ ಕೆಲಸವನ್ನು ಬಿಡಿಎ ಮುಗಿಸಿದೆ. ಹಸಿರು ನ್ಯಾಯಾಧಿಕರಣ ನೇಮಿಸಿದ ತಜ್ಞರ ಸಮಿತಿ ಶೀಘ್ರದಲ್ಲಿಯೇ ಕೆರೆ ಪರಿಶೀಲನೆಗೆ ಬರಲಿದೆ. ಆದರೆ ತೂಬು ಗೇಟ್‌ನ ಕೆಲಸ ಬಾಕಿ ಇದೆ. ಸಣ್ಣ ಕೈಗಾರಿಕೆ ಇಲಾಖೆ ಕೆ.ಸಿ.ವ್ಯಾಲಿ ಯೋಜನೆಯ ಪೈಪ್‌ಲೈನ್‌ಗಾಗಿ ಕೆರೆಯ ಉದ್ದಕ್ಕೂ ಗುಂಡಿ ತೋಡುವ ಮೂಲಕ ಹಸಿರು ನ್ಯಾಯಾಧಿಕರಣದ ಆದೇಶವನ್ನು ಉಲ್ಲಂಘಿಸಿದೆ’ ಎಂದು ಕೆರೆ ವಾರ್ಡನ್‌ ಜಗದೀಶ್‌ ರೆಡ್ಡಿ ಹೇಳಿದರು. ದ್ದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.