ದಾಬಸ್ ಪೇಟೆ: ‘ಸೂರಿಲ್ಲದ, ನಿರ್ಗತಿಕ, ವಯಸ್ಸಾದ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ‘ವಾತ್ಸಲ್ಯ’ ಮನೆ ಕಟ್ಟಿ ಕೊಡಲಾಗುತ್ತಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.
ನೆಲಮಂಗಲ ತಾಲ್ಲೂಕು ನಿಜಗಲ್ ಗ್ರಾಮದ ಲಕ್ಷ್ಮಮ್ಮ ಅವರಿಗೆ 724ನೇ ವಾತ್ಸಲ್ಯ ಮನೆಯನ್ನು ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು.
‘ಹೇಮಾವತಿ ಹೆಗ್ಗಡೆ ಹಾಗೂ ಮಗಳು ಶ್ರದ್ಧಾ ಅವರು ಈ ಯೋಜನೆಯನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಾತ್ಸಲ್ಯ ಮನೆ ಕಟ್ಟಿಕೊಡುವಂತಹ ಪುಣ್ಯದ ಕೆಲಸಕ್ಕೆ ₹11.45 ಕೋಟಿ ವಿನಿಯೋಗಿಸಲಾಗಿದೆ’ ಎಂದು ತಿಳಿಸಿದರು.
‘ಕೆರೆ ಹೂಳೆತ್ತುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒತ್ತು ಕೊಟ್ಟಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ 47 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದಲ್ಲಿ ಸಾವಿರ ಕೆರೆ ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕೆರೆ ಹೂಳೆತ್ತುವುದರಿಂದ ಅಲ್ಲಿ ಸಿಗುವ ಮಣ್ಣು ತೆಗೆದುಕೊಂಡು ರೈತರು ತಮ್ಮ ಹೊಲ ಹಾಗೂ ತೋಟಗಳಿಗೆ ಬಳಸಿಕೊಂಡು ಉತ್ತಮ ಬೆಳೆ ಬೆಳೆಯಬಹುದು’ ಎಂದು ಹೇಳಿದರು.
ಶ್ರದ್ಧಾ ಅಮಿತ್ ಮಾತನಾಡಿ, ‘ವಾತ್ಸಲ್ಯ ಮನೆ ನಿರ್ಮಿಸಿ ಕೊಡುವುದರ ಜೊತೆಗೆ, ವಾತ್ಸಲ್ಯ ಕಿಟ್ ಅಡಿ ಪೌಷ್ಟಿಕವಾದ ಆಹಾರ ಪದಾರ್ಥಗಳನ್ನು ಹಾಗೂ ಪ್ರತಿ ತಿಂಗಳು ಮಾಸಾಶನ ಕೊಟ್ಟು ನಿರ್ಗತಿಕ ಮಹಿಳೆಯರು ಚಿಂತೆ ಇಲ್ಲದೆ ಜೀವನ ನಡೆಸಲು ಸಹಾಯ ಮಾಡಲಾಗುತ್ತಿದೆ. ಗ್ರಾಮಸ್ಥರು ಇಂತಹವರನ್ನು ಪ್ರೀತಿಯಿಂದ ನೋಡಬೇಕು. ಅವರಲ್ಲಿ ಅನಾಥರು ಎನ್ನುವ ಭಾವನೆ ಬರದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮರಬ್ಬ, ತಾಲ್ಲೂಕು ಯೋಜನಾಧಿಕಾರಿ ಸುಜಾತ ಶೆಟ್ಟಿ, ವಲಯ ಮೇಲ್ವಿಚಾರಕ ಹರೀಶ್ ಎಂ.ಟಿ, ಜ್ಞಾನ ವಿಕಾಸ ಯೋಜನಾಧಿಕಾರಿ ಸಂಗೀತ ಹಾಗೂ ಸಮನ್ವಯಾಧಿಕಾರಿ ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.