ADVERTISEMENT

ವಿಟಿಯು ಕುಲಸಚಿವರ ಪ್ರಕರಣ: ಕಾಯ್ದಿರಿಸಿದ ಆದೇಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:00 IST
Last Updated 23 ಏಪ್ರಿಲ್ 2019, 20:00 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಸಚಿವ ಡಾ. ಎಚ್.ಎನ್. ಜಗನ್ನಾಥ ರೆಡ್ಡಿ ಅಮಾನತಿಗೆ ತಡೆ ನೀಡಿರುವ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ.

ಈ ಕುರಿತಂತೆ ವಿಟಿಯು ವಿಶೇಷಾಧಿಕಾರಿ ರವಿ ಎಚ್.ತಲವಾರ್ ಸಲ್ಲಿಸಿರುವ ಅರ್ಜಿ ಮೇಲಿನ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಪೂರ್ಣಗೊಳಿಸಿತು.

ವಿವಿ ಪರ ವಕೀಲರು ವಾದ ಮಂಡಿಸಿ, ‘ಜಗನ್ನಾಥ ರೆಡ್ಡಿ ವಿರುದ್ಧ ಗಂಭೀರ ಸ್ವರೂಪದ ಆರು ಆರೋಪಗಳಿವೆ. ಅವರನ್ನು ಫೆಬ್ರುವರಿಯಲ್ಲೇ ಅಮಾನತು ಮಾಡಲಾಗಿದೆ. ಆದರೆ, ಅವರು ಎರಡು ತಿಂಗಳು ಸುಮ್ಮನಿದ್ದು, ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ಮನವಿಯನ್ನು ತಿದ್ದುಪಡಿ ಮಾಡಿ ಮಧ್ಯಂತರ ಆದೇಶ ಪಡೆದುಕೊಂಡಿದ್ದಾರೆ. ಆದ್ದರಿಂದ ಅದನ್ನು ರದ್ದುಪಡಿಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಆಕ್ಷೇಪಿಸಿದ ಜಗನ್ನಾಥ ರೆಡ್ಡಿ ಪರ ವಕೀಲರು, ‘ಅರ್ಜಿದಾರರು ₹ 200 ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ಅನಾಮಧೇಯ ವ್ಯಕ್ತಿಗಳು ಮಾಡಿರುವ ಆರೋಪವನ್ನೇ ಮುಂದಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ದೂರಿನಲ್ಲಿ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ’ ಎಂದರು.

ಪ್ರಾಥಮಿಕ ತನಿಖೆ ವೇಳೆ ಮತ್ತು ವಿ.ವಿ.ಯ ಆಡಳಿತ ಮಂಡಳಿ ಸಭೆಯಲ್ಲಿ ಅರ್ಜಿದಾರರ ವಾದ ಆಲಿಸಿಲ್ಲ. ಕುಲಪತಿಗಳು ಉದ್ದೇಶ ಪೂರ್ವಕವಾಗಿ ಅರ್ಜಿದಾರರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.