ಬೆಂಗಳೂರು: ಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪದಡಿ ಸಿ. ನಿಖಿಲ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಹಳ್ಳಿಯ ನಿಖಿಲ್, ಈ ಹಿಂದೆ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ. ಜೈಲಿಗೆ ಹೋಗಿ ಜಾಮೀನು ಮೇಲೆ ಇತ್ತೀಚೆಗಷ್ಟೇ ಹೊರಗೆ ಬಂದಿದ್ದ. ಆತನಿಂದ ₹ 2.65 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಬ್ಯಾಡರಹಳ್ಳಿ ಪೊಲೀಸರು ಹೇಳಿದರು.
‘ಲಾಕ್ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳ ತಪಾಸಣೆಗಾಗಿ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ಮೇ 25ರಂದು ಚೆಕ್ಪೋಸ್ಟ್ ಮೂಲಕ ಹೊರಟಿದ್ದ ಆರೋಪಿಯ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಲಾಗಿತ್ತು.’
‘ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಆರೋಪಿ ಹಾಜರುಪಡಿಸಿರಲಿಲ್ಲ. ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದರು.
ಸ್ನೇಹಿತನ ಜೊತೆ ಕೃತ್ಯ: ’ಹಲವು ವರ್ಷಗಳಿಂದ ಆರೋಪಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ಸ್ನೇಹಿತನ ಜೊತೆ ಸೇರಿ ಮೊಬೈಲ್ ಕಲವು ಮಾಡುತ್ತಿದ್ದ ಬಗ್ಗೆ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಸ್ನೇಹಿತನ ಸಮೇತ ಬಂಧಿಸಿ 50ಕ್ಕೂ ಹೆಚ್ಚು ಮೊಬೈಲ್ ಜಪ್ತಿ ಮಾಡಲಾಗಿತ್ತು’ ಎಂದೂ ಪೊಲೀಸರು ಹೇಳಿದರು.
‘ಜೈಲಿನಿಂದ ಜಾಮೀನು ಮೇಲೆ ಹೊರಗೆ ಬಂದಿದ್ದ ಆರೋಪಿ, ವಾಹನ ಕಳ್ಳತನ ಮಾಡಲಾರಂಭಿಸಿದ್ದರು. ಮೇ 17ರಂದು ಆಂಧ್ರಹಳ್ಳಿಯ ಡಿ ಗ್ರೂಪ್ ಲೇಔಟ್ನಲ್ಲಿ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.