ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ರೋಗಿಯೊಬ್ಬರ ನರಳಾಟದ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರು ಹಾಗೂ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನಡುವೆ ಭಾನುವಾರ ಬೆಳಿಗ್ಗೆ ಜಟಾಪಟಿ ನಡೆಯಿತು.
ಅನಾರೋಗ್ಯಕ್ಕೆ ತುತ್ತಾಗಿದ್ದ ಬನಶಂಕರಿ ನಿವಾಸಿ 53 ವರ್ಷದ ಪ್ರಕಾಶ್ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಉಸಿರಾಟದ ಸಮಸ್ಯೆಯಿಂದಾಗಿ ಪ್ರಕಾಶ್, ಆಟೊದಲ್ಲಿ ನರಳಾಡುತ್ತಿದ್ದರು.
ಆ ಬಗ್ಗೆ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು, ಆಸ್ಪತ್ರೆ ಆವರಣಕ್ಕೆ ಹೋಗಿದ್ದರು. ಅವರನ್ನು ತಡೆದ ಭದ್ರತಾ ಸಿಬ್ಬಂದಿ, ‘ಮಾಧ್ಯಮವರನ್ನು ಒಳಗೆ ಬಿಡದಂತೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಒಳಗೆ ಬಿಡುವುದಿಲ್ಲ’ ಎಂದು ಹೇಳಿ ತಳ್ಳಾಡಿದರು. ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿದರು. ಇದೇ ವೇಳೆ ಜಟಾಪಟಿ ನಡೆಯಿತು.
ಪ್ರಕಾಶ್ ಅವರ ಪತ್ನಿ ಭಾಗ್ಯ, ‘ಬೆಡ್ ಇಲ್ಲವೆಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಆಟೊದಲ್ಲೇ ಪತಿ ನರಳುತ್ತಿದ್ದು, ದಯವಿಟ್ಟು ಆಸ್ಪತ್ರೆಗೆ ಸೇರಿಸಿ’ ಎಂದು ಗೋಳಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.