ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋಯುರಾಲಜಿ ಸಂಸ್ಥೆಯಲ್ಲಿ ಮಾನವ ಅಂಗಾಂಗಗಳ ಮತ್ತು ಅಂಗಾಂಗ ಕಸಿ ಜೋಡಣೆಗಾಗಿ ರಾಜ್ಯಮಟ್ಟದ ಅಧಿಕಾರಯುಕ್ತ ಸಮಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪುನರ್ರಚಿಸಿದೆ.
ನೆಫ್ರೋಯುರಾಲಜಿ ಸಂಸ್ಥೆಯ ನಿರ್ದೇಶಕರು ಅಧ್ಯಕ್ಷರಾಗಿರುತ್ತಾರೆ. ನಿವೃತ್ತ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಎಲ್. ಮೂರ್ತಿ, ಬಿಎಂಸಿಆರ್ಐ ಕಮ್ಯುನಿಟಿ ಮೆಡಿಸಿನ್ ವಿಭಾಗೀಯ ಮುಖ್ಯಸ್ಥ ಡಾ. ರಂಗನಾಥ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಆರ್. ಕುಮಾರಸ್ವಾಮಿ, ವಾಣಿವಿಲಾಸ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಚಿತ್ರಾ ರಾಮಮೂರ್ತಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅಥವಾ ಇವರನ್ನು ಪ್ರತಿನಿಧಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಉಪ ಕಾರ್ಯದರ್ಶಿ ವೃಂದದ ಹುದ್ದೆಗಿಂತ ಕಡಿಮೆ ದರ್ಜೆಯವರಲ್ಲದ ನಾಮ ನಿರ್ದೇಶಿತ ಅಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಅಥವಾ ಅವರನ್ನು ಪ್ರತಿನಿಧಿಸುವ ಸಹನಿರ್ದೇಶಕರು ಸದಸ್ಯರಾಗಿರುತ್ತಾರೆ.
208 ವಾಹನಗಳಿಗೆ ದಂಡ
ಬೆಂಗಳೂರು: ಯಲಹಂಕ ಮತ್ತು ದೇವನಹಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಖಾಸಗಿ ವಾಹನಗಳನ್ನು ವಾಣಿಜ್ಯ ಬಳಕೆ ಮಾಡುತ್ತಿದ್ದ, ರಸ್ತೆ ಸಾರಿಗೆ ನಿಯಮ ಉಲ್ಲಂಘಿಸಿದ್ದ 208 ವಾಹನಗಳನ್ನು ಪತ್ತೆಹಚ್ಚಿದ್ದಾರೆ.
21 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಉಳಿದ ವಾಹನಗಳಿಗೆ ದಂಡ ವಿಧಿಸಿದ್ದಾರೆ.
ಜಂಟಿ ಸರಿಗೆ ಆಯುಕ್ತರ ನೇತೃತ್ವದಲ್ಲಿ 11 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡವು 650ಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.