ಬೆಂಗಳೂರು: ನಗರದಲ್ಲಿನ ಕೋವಿಡ್ ಪೀಡಿತರಲ್ಲಿ ಬಹುತೇಕ ಎಲ್ಲರೂ ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದು, ಸದ್ಯ ಸೋಂಕಿತರಲ್ಲಿ ಶೇ 0.66 ರಷ್ಟು ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದಲ್ಲಿ ಸದ್ಯ 6 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಚಿಕಿತ್ಸೆಗಾಗಿ ಸರ್ಕಾರಿ ವ್ಯವಸ್ಥೆಯಡಿ 1,849 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅವುಗಳಲ್ಲಿ ಶೇ 99ರಷ್ಟು ಖಾಲಿ ಉಳಿದಿವೆ. 44 ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ಮಾರ್ಚ್ ಎರಡನೇ ವಾರದ ಬಳಿಕ ಏರಿಕೆ ಕಂಡಿದ್ದರಿಂದ ಸರ್ಕಾರ, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಸರ್ಕಾರಿ ಕೋಟಾದಡಿ ಶಿಫಾರಸು ಆಧಾರದಲ್ಲಿ ಚಿಕಿತ್ಸೆ ನೀಡಲು ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ, ಆದೇಶ ಹೊರಡಿಸಿತ್ತು. ಇದರಿಂದಾಗಿ ಕೋವಿಡ್ ಚಿಕಿತ್ಸೆಗೆ ನಗರದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳು ಲಭ್ಯವಿದ್ದವು.
ಮೇ ತಿಂಗಳಲ್ಲಿ ನಗರವೊಂದರಲ್ಲೇ 2.25 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದವು.ಜುಲೈ ಬಳಿಕ ಇಳಿಕೆ ಕಂಡಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಕಾರಣ ವಿಕ್ಟೋರಿಯಾಸೇರಿ ಕೆಲ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆಗಳನ್ನು ಉಳಿಸಿಕೊಳ್ಳಲಾಗಿದೆ.
ತೀವ್ರತೆ ಕಡಿಮೆ: ಆಸ್ಪತ್ರೆಯಲ್ಲಿರುವ 44 ಕೋವಿಡ್ ಪೀಡಿತರಲ್ಲಿ 33 ಮಂದಿಗೆ ಸಾಮಾನ್ಯ ಹಾಸಿಗೆಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆ, ಒಬ್ಬರು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘18 ವರ್ಷ ಮೇಲ್ಪಟ್ಟ ಹೆಚ್ಚಿನವರು ಕೋವಿಡ್ ಲಸಿಕೆ ಪಡೆದಿದ್ದಾರೆ. ಇದರಿಂದಾಗಿ ಸೋಂಕು ತಗುಲಿದ್ದರೂ ಬಹುತೇಕರಿಗೆಲಕ್ಷಣಗಳು ಗೋಚರಿಸುತ್ತಿಲ್ಲ. ಸಮುದಾಯ ಹಂತದಲ್ಲಿಯೂ‘ಸಮೂಹ ರೋಗ ನಿರೋಧಕ ಶಕ್ತಿ’ (ಹರ್ಡ್ ಇಮ್ಯುನಿಟಿ) ವೃದ್ಧಿಯಾಗುತ್ತಿದೆ. ಎಲ್ಲರೂ ಎರಡು ಡೋಸ್ ಲಸಿಕೆ ಪಡೆದಲ್ಲಿ ಪೂರ್ಣ ಪ್ರಮಾಣ ಸಮೂಹ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ’ ಎಂಬುದು ವೈದ್ಯಕೀಯ ತಜ್ಞರ ಅಭಿಮತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.