
ಬೆಂಗಳೂರು: ವಿಶ್ವಕರ್ಮ ಸೇವಾ ಸಮಿತಿ ಆಯೋಜಿಸಿದ್ದ 43ನೇ ವರ್ಷದ ವಿಶ್ವಕರ್ಮ ಬ್ರಹ್ಮ ರಥೋತ್ಸವ ಹಾಗೂ ವಿಶ್ವಕರ್ಮ ಜನಜಾಗೃತಿ ಸಮಾವೇಶ ಭಕ್ತಿಭಾವದಿಂದ ನಡೆಯಿತು.
ನಗರ್ತಪೇಟೆಯ ಕಾಳಿಕಾಂಬಾ ಕಮಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶ್ವಕರ್ಮ ಬ್ರಹ್ಮ ರಥೋತ್ಸವ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ವಿಶ್ವಕರ್ಮ ಸುಪ್ರಭಾತ, ಗಣಪತಿ ಪೂಜೆ, ವಿಶ್ವಕರ್ಮ ಹೋಮ ಹಾಗೂ ಪೂರ್ಣಾಹುತಿ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ವಿಶ್ವಕರ್ಮ ರಜತ ಮೂರ್ತಿಗೆ ಪಂಚಾಮೃತ ಅಭಿಷೇಕ ಜರುಗಿತು. ಬ್ರಹ್ಮರಥವು ದೇವಾಲಯದಿಂದ ಹೊರಟು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಾಗಿತು. ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಜನಪದ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಸಂಜೆ ಪುರಭವನದಲ್ಲಿ ವಿಶ್ವಕರ್ಮ ಜನಜಾಗೃತಿ ಸಮಾವೇಶ ಆಯೋಜಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ, ಸಮುದಾಯದ ಹಿರಿಯರಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು.
ಶಿವಸುಜ್ಞಾನತೀರ್ಥ ಸ್ವಾಮೀಜಿ, ಬುದ್ಧಾತ್ಮಾನಂದ ಸರಸ್ವತಿ ಸ್ವಾಮೀಜಿ, ನೀಲಕಂಠಾಚಾರ್ಯ ಸ್ವಾಮೀಜಿ, ವಿಶ್ವಕರ್ಮ ಸೇವಾ ಸಮಿತಿ ಚಿನ್ನ ಬೆಳ್ಳಿ ಕಾರ್ಮಿಕರ ಘಟಕದ ಅಧ್ಯಕ್ಷ ಆರ್. ಮಧುಸೂದನ್, ಪ್ರಧಾನ ಕಾರ್ಯದರ್ಶಿ ಎಂ. ಮಧುಸೂದನ್, ಪ್ರಮುಖರಾದ ಪ್ರಭಾಕರ್, ಶ್ರೀನಿವಾಸಾಚಾರ್ಯ, ಲಕ್ಷ್ಮೀನಾರಾಯಣ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ, ವಿಶ್ವಕರ್ಮ ಸೇವಾ ಸಮಿತಿ ಹಾಗೂ ಗೋಲ್ಡ್ ಅಂಡ್ ಸಿಲ್ವರ್ ವರ್ಕರ್ಸ್ ಯೂನಿಯನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.