ಬೆಂಗಳೂರು: ‘ವಯಸ್ಸು ಮುಖ್ಯವಲ್ಲ. ಜೀವನದ ಅವಧಿಯಲ್ಲಿ ನಾವು ಹೇಗೆ ಬಾಳಬೇಕು, ಯಾವ ರೀತಿ ಜನರ ವಿಶ್ವಾಸಕ್ಕೆ ಪಾತ್ರವಾಗಬೇಕು ಎಂಬುದು ಮುಖ್ಯ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ತಿಳಿಸಿದರು.
ನಗರದಲ್ಲಿ ಭಾನುವಾರ ಶೃಂಗಾರ ಪ್ರಕಾಶನ ಆಯೋಜಿಸಿದ್ದ ಪ್ರೊ.ನಾ. ದಯಾನಂದ ಅವರು ಎಂ.ಜೆ. ಇಂದ್ರಕುಮಾರ್ ಕುರಿತು ಬರೆದಿರುವ ‘ವಿಶ್ವಾಸ’ (ನಂಬಿಕೆಯ ಜೀವಂತ ರೂಪಕ: ನ್ಯಾಯಾಧೀಶ ಇಂದ್ರಕುಮಾರ್ ಬದುಕು) ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಲ್ಲಿ ಅವರು ಮಾತನಾಡಿದರು.
‘ಮೇರು ವ್ಯಕ್ತಿತ್ವವುಳ್ಳವರ ಕುರಿತು ಪುಸ್ತಕ ಪ್ರಕಟಿಸಿ ಸಮಾಜಕ್ಕೆ ಪರಿಚಯಿಸುವುದು ಶ್ಲಾಘನೀಯ ಕಾರ್ಯ. ಇಂದ್ರಕುಮಾರ್ ಅವರ ಇಡೀ ಜೀವನ ಮತ್ತು
ವ್ಯಕ್ತಿತ್ವವನ್ನು ‘ವಿಶ್ವಾಸ’ ಎನ್ನುವ ಮೂರೇ ಶಬ್ದಗಳಲ್ಲಿ ಲೇಖಕ ಪ್ರೊ. ನಾ. ದಯಾನಂದ ವಿವರಿಸಿದ್ದಾರೆ. ಈ ಪುಸ್ತಕ ರೂಪ, ಸ್ವರೂಪ, ಮಹತ್ವ, ಅನನ್ಯತೆ
ಯಿಂದ ಕೂಡಿದೆ. ಅವರ ಬದುಕು ಎಲ್ಲರಿಗೂ ಮಾದರಿ’ ಎಂದು ತಿಳಿಸಿದರು.
ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ‘ಜೀವನ ಚರಿತ್ರೆಯಲ್ಲಿ ಎಲ್ಲವನ್ನು ಹಿಡಿದಿಡಲು ಸಾಧ್ಯವಿಲ್ಲ. ಆದರೆ, ಆತ್ಮಚರಿತ್ರೆ ಬರೆಯುವುದು ಸುಲಭವೂ ಅಲ್ಲ, ಅನೇಕ ಸಂಗತಿಗಳನ್ನು ಬರೆಯುವಂತೆ ಇರುವುದಿಲ್ಲ. ತಮ್ಮ ದೌರ್ಬಲ್ಯಗಳನ್ನು ಹೇಳಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ. ಆದ್ದರಿಂದ, ಯಾರು ಆತ್ಮಚರಿತ್ರೆ ಬರೆಯುವ ಗೊಡವೆಗೆ ಹೋಗುವುದಿಲ್ಲ. ಈ ಮಿತಿಗಳು ಚರಿತ್ರೆಕಾರನಿಗೂ ಇರುತ್ತವೆ’ ಎಂದರು.
ಕರ್ನಾಟಕ ಜೈನ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜೀತೇಂದ್ರಕುಮಾರ್, ಲೇಖಕ ಪ್ರೊ.ನಾ. ದಯಾನಂದ, ಶೃಂಗಾರ ಪ್ರಕಾಶನದ ಡಾ. ಎಂ.ವಿ. ನಾಗರಾಜ ರಾವ್ ಇದ್ದರು.
ಪುಸ್ತಕ ಪರಿಚಯ
ಪುಸ್ತಕ: ವಿಶ್ವಾಸ (ನಂಬಿಕೆಯ ಜೀವಂತ ರೂಪಕ: ನ್ಯಾಯಾಧೀಶ ಇಂದ್ರಕುಮಾರ್ ಬದುಕು)
ಲೇಖಕರು: ಪ್ರೊ.ನಾ. ದಯಾನಂದ
ಪ್ರಕಾಶನ: ಶೃಂಗಾರ ಪ್ರಕಾಶನ, ಚಿಕ್ಕನಾಯಕನಹಳ್ಳಿ
ಬೆಲೆ: ₹275
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.