ತುಮಕೂರು: ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಮುದಾಯದವರು ಹಾಗೂ ಶಿವಕುಮಾರ್ ಬೆಂಬಲಿಗರು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಎದುರಲ್ಲಿಯೇ ಡಿಕೆಶಿ ಪರ ಜೈಕಾರ ಕೂಗಿದ ಪ್ರಸಂಗ ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ನಡೆಯಿತು.
ನೊಣವಿನಕೆರೆಯಲ್ಲಿ ಆದಿ ಚುಂಚನಗಿರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮ ಇತ್ತು. ಅಶ್ವತ್ಥನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಪೂಜಾ ಕಾರ್ಯ ಮುಗಿಸಿ ಉದ್ಘಾಟನೆಗೆ ಜೊತೆಯಲ್ಲಿ ಬರುತ್ತಿದ್ದರು.
ಆಗ ಕೆಲವರು ಶಿವಕುಮಾರ್ ಪರ ಜೋರುಧ್ವನಿಯಲ್ಲಿ ಜಯಕಾರ ಕೂಗಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಅಶ್ವತ್ಥನಾರಾಯಣ್ ಇರುಸುಮುರುಸಿಗೆ ಒಳಗಾದವರಂತೆ ಕಂಡು ಬಂದರು.
ಶಿವಕುಮಾರ್, ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಪರಮಭಕ್ತರು. ನೊಣವಿನಕೆರೆ ಜತೆ ಈ ಹಿಂದಿನಿಂದಲೂ ಅವರಿಗೆ ಉತ್ತಮ ಸಂಪರ್ಕ ಇದೆ.
ಬಿಜೆಪಿಗೆ ಸಂಬಂಧವಿಲ್ಲ: ‘ಡಿ.ಕೆ.ಶಿವಕುಮಾರ್ ಅವರ ಬಂಧನದ ವಿಚಾರವು ತೆರಿಗೆ ವಂಚನೆ, ಹಣಕಾಸು ವಹಿವಾಟಿಗೆ ಸಂಬಂಧಿಸಿದೆ. ಪಾರದರ್ಶಕವಾಗಿ ವಿಚಾರಣೆ ನಡೆಯುತ್ತಿದೆ. ಈ ವಿಚಾರವನ್ನು ಜಾತಿಯ ದೃಷ್ಟಿಯಲ್ಲಿ ನೋಡಬಾರದು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ’ ಎಂದು ಅಶ್ವತ್ಥನಾರಾಯಣ್ ತುರುವೇಕೆರೆಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.