ADVERTISEMENT

ಒಕ್ಕಲಿಗ ಸಂಘದ ಚುನಾವಣೆ ರದ್ದುಪಡಿಸಲು ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 21:24 IST
Last Updated 1 ಡಿಸೆಂಬರ್ 2021, 21:24 IST

ಬೆಂಗಳೂರು: ‘ಅಕ್ರಮಗಳು ಮಿತಿ ಮೀರಿರುವ ಕಾರಣ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯನ್ನು ರದ್ದುಪಡಿಸಬೇಕು’ ಎಂದು ಚುನಾವಣೆಯ ಅಭ್ಯರ್ಥಿ ಹಾಗೂಆಮ್‌ ಆದ್ಮಿ ಪಕ್ಷದ ಮುಖಂಡ ಚನ್ನಪ್ಪಗೌಡ ನೆಲ್ಲೂರು ಆಗ್ರಹಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.12ರಂದು ನಡೆಯಲಿರುವ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆಗೆ ರಾಜಕಾರಣಿಗಳು, ನಿವೃತ್ತ ಹಾಗೂ ಹಾಲಿ ಸರ್ಕಾರಿ ಅಧಿಕಾರಿಗಳು, ಭ್ರಷ್ಟರು ಸ್ಪರ್ಧಿಸಿದ್ದಾರೆ. ಅವರು ಅಕ್ರಮ ಮಾರ್ಗಗಳಲ್ಲಿ ಗಳಿಸಿದ ಹಣವನ್ನು ಮತದಾರರಿಗೆ ಹಂಚಲು ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಹಣದ ಬಗ್ಗೆ ಯಾವುದೇ ಇಲಾಖೆಗೆ ಸೂಕ್ತ ಲೆಕ್ಕ ಸಲ್ಲಿಸದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಒಕ್ಕಲಿಗರ ಸಂಘದ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ’ ಎಂದರು.

ADVERTISEMENT

‌ಎಎಪಿ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಬಿ.ಟಿ.ನಾಗಣ್ಣ, ‘ಮತದಾರರ ಪಟ್ಟಿಯಲ್ಲಿನ ಅಕ್ರಮದ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದ್ದರೂ, ‌ಈವರೆಗೆ ಯಾವುದೇ ಕ್ರಮ ಜರುಗಿಲ್ಲ.‌ ಚುನಾವಣೆಯಲ್ಲಿ ಭ್ರಷ್ಟ‌ ಅಭ್ಯರ್ಥಿಗಳು ಗೆದ್ದರೆ, ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಪಾಸ್ತಿಗಳಿಗೆ ಧಕ್ಕೆಯಾಗುವ ಸಂಭವವಿದೆ. ಹಾಗಾಗಿ, ಚುನಾವಣೆ ರದ್ದುಪಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.