ADVERTISEMENT

‘ಅಕ್ರಮ ವ್ಯಾಪಾರ ಬಂದ್ ಯಾವಾಗ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 22:58 IST
Last Updated 2 ಜನವರಿ 2023, 22:58 IST
   

ಬೆಂಗಳೂರು: ‘ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೆಜೆಸ್ಟಿಕ್‌ ಸುರಂಗ ಮಾರ್ಗದಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಯಾವಾಗ, ಪಾದಚಾರಿಗಳು ಧೈರ್ಯವಾಗಿ ಸುತ್ತಾಡುವುದು ಯಾವಾಗ’ ಎಂದು ಸಾರ್ವಜನಿಕರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.

‘ಮೆಜೆಸ್ಟಿಕ್ ಅಕ್ರಮ ವ್ಯಾಪಾರ: ಪ್ರಶ್ನಿಸಿದರೆ ಇರಿತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಡಿ. 31ರಂದು ಪ್ರಕಟಿಸಿದ್ದ ವರದಿ
ಉಲ್ಲೇಖಿಸಿ ಸಾರ್ವಜನಿಕರು
ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲ ಸಾರ್ವಜನಿಕರ ಆಯ್ದ ಅಭಿಪ್ರಾಯಗಳನ್ನು ಇಲ್ಲಿ
ಉಲ್ಲೇಖಿಸಲಾಗಿದೆ.

ರೌಡಿಗಳ ರೀತಿ ವರ್ತನೆ

ADVERTISEMENT

ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ಅಕ್ರಮವಾಗಿ ವ್ಯಾಪಾರ ಮಾಡುತ್ತಿರುವವರು ರೌಡಿಗಳಂತೆ ವರ್ತಿಸುತ್ತಾರೆ. ಮೆಜೆಸ್ಟಿಕ್ ಮಾತ್ರವಲ್ಲದೇ ಕೆ.ಆರ್. ಮಾರ್ಕೆಟ್, ಅವೆನ್ಯೂ ರಸ್ತೆಯಲ್ಲೂ ಅಕ್ರಮ ವ್ಯಾಪಾರವಿದೆ. ರಸ್ತೆಯ ಅಕ್ಕ–ಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿಗಳು, ಚೌಕಾಶಿ ಮಾಡಿದರೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.

ಕೆ.ಎಸ್.ಗಂಗಾಧರ, ಕೊಮ್ಮಘಟ್ಟ, ಕೆಂಗೇರಿ

ಅನುಚಿತ ವರ್ತನೆ: ನಗರದ ಹೆಸರಿಗೆ ಕಳಂಕ

ದೇಶ–ವಿದೇಶಗಳ ಜನ ಮೆಜೆಸ್ಟಿಕ್‌ಗೆ ಬಂದು ಹೋಗುತ್ತಾರೆ. ಸುರಂಗ ಮಾರ್ಗದಲ್ಲಿರುವ ಅಕ್ರಮ ವ್ಯಾಪಾರಿಗಳು, ಜನರ ಜೊತೆ ಅನುಚಿತವಾಗಿ ವರ್ತಿಸಿ ಬೆಂಗಳೂರಿನ ಹೆಸರಿಗೆ ಕಳಂಕ ತರುತ್ತಿದ್ದಾರೆ. ಇಂಥ ವ್ಯಾಪಾರಿಗಳಿಂದ ಪಾದಚಾರಿಗಳು ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ. ಮಹಿಳೆಯರ ಮೇಲೂ ಹಲ್ಲೆಗಳು ನಡೆಯುತ್ತಿವೆ.

-ಎಸ್‌. ಹೇಮಂತ, ರಾಜಾಜಿನಗರ

ಗುಂಪು ಕಟ್ಟಿಕೊಂಡು ಗಲಾಟೆ

ಮೆಜೆಸ್ಟಿಕ್ ಸುರಂಗ ಮಾರ್ಗದಲ್ಲಿ ಸಂಬಂಧಿಕರ ಮಗನೊಬ್ಬ ಕ್ಯಾಪ್ ಖರೀದಿಸಲು ಮುಂದಾಗಿದ್ದ. ಬಣ್ಣ ಚೆನ್ನಾಗಿಲ್ಲವೆಂದು ಕ್ಯಾಪ್‌ ವಾಪಸು ಕೊಟ್ಟಿದ್ದ. ಅಷ್ಟಕ್ಕೇ ವ್ಯಾಪಾರಿ ಅವಾಚ್ಯ ಶಬ್ದಗಳಿಂದ ಬೈದ. ಅದನ್ನು ಪ್ರಶ್ನಿಸಿದ್ದಕ್ಕೆ, ಅಕ್ಕ–ಪಕ್ಕದ ವ್ಯಾಪಾರಿಗಳೆಲ್ಲರೂ ಒಟ್ಟಿಗೆ ಬಂದು ಗಲಾಟೆ ಮಾಡಿದರು. ಸುರಂಗ ಮಾರ್ಗದಲ್ಲಿ ಹೊರಟಿದ್ದ ಪೊಲೀಸರನ್ನು ಹೇಳಿದಾಗ, ನಮ್ಮದೇ ತಪ್ಪೆಂದು ವ್ಯಾಪಾರಿಗಳ ಪರ ಮಾತನಾಡಿದರು. ನಮ್ಮಂತೆ ನಿತ್ಯವೂ ಸಾವಿರಾರು ಮಂದಿ ಸುರಂಗ ಮಾರ್ಗದಲ್ಲಿ ಓಡಾಡುತ್ತಾರೆ. ಅವರೆಲ್ಲರಿಗೂ ವ್ಯಾಪಾರಿಗಳಿಂದ ತೊಂದರೆ ಆಗಿದೆ. ಸುರಂಗ ಮಾರ್ಗದಲ್ಲಿ ಮುಲಾಜಿಲ್ಲದೇ ವ್ಯಾಪಾರ–ವಹಿವಾಟು ನಿರ್ಬಂಧಿಸಬೇಕು.

-ಅಶೋಕ, ನೆಲಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.