ಬೆಂಗಳೂರು: ವೈಟ್ಫೀಲ್ಡ್ ಸಮೀಪದ ಸಾದರಮಂಗಲ ಕೆರೆಯಂಗಳದಲ್ಲಿ ಸಂಗ್ರಹವಾಗಿರುವ ಕಸದ ರಾಶಿಗೆ ಬೆಂಕಿ ಹೊತ್ತಿ ಉರಿದ ಘಟನೆ ಶನಿವಾರ ರಾತ್ರಿ ನಡೆದಿದೆ. ವಿಸ್ತಾ ಅಪಾರ್ಟ್ಮೆಂಟ್ನ ನಿವಾಸಿಗಳು ಘಟನೆಯನ್ನು ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.
ಬೆಂಕಿ ನಂದಿಸಲು ಅಗ್ನಿಶಾಮಕ ಸೇವೆಯ ಸಿಬ್ಬಂದಿ ಬಂದಾಗ, ಮತ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಎಚ್ಚರಗೊಳ್ಳಲಿಲ್ಲ.ಕೊನೆಗೆ ಪ್ರವೇಶದ್ವಾರದ ಬೀಗ ಒಡೆದು ಕೆರೆ ಅಂಗಳ ಪ್ರವೇಶಿಸಿದರು.
‘ಕೆರೆ ಅಂಗಳದಲ್ಲಿ ಭಾರಿ ಪ್ರಮಾಣದಲ್ಲಿ ಕಸ ಸಂಗ್ರಹ ಆಗುತ್ತಿದೆ. ಭದ್ರತಾ ಸಿಬ್ಬಂದಿ ಕಸ ಸಾಗಣೆ ಖಾಸಗಿ ವಾಹನಗಳಿಗೂ ಪ್ರವೇಶ ನೀಡುತ್ತಾರೆ.ರಾಸಾಯನಿಕಗಳು ಹಾಗೂ ಇ–ತ್ಯಾಜ್ಯಗಳನ್ನು ಕಸದ ಜೊತೆಗೆ ಸುಟ್ಟ ಕಾರಣ ಬೆಂಕಿ ಹೊತ್ತಿ ಉರಿದಿರುವ ಸಾಧ್ಯತೆ ಇದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ವೈಟ್ಫೀಲ್ಡ್ ನಿವಾಸಿ ಸಂದೀಪ್ ಅನಿರುದ್ಧನ್ ದೂರಿದರು.
ಈ ಘಟನೆ ಸಂಬಂಧ ಸ್ಥಳೀಯರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹಾಗೂ ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ‘ಇಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಕಸ ಹಾಕುವುದನ್ನು ತಡೆಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.