ಬೆಂಗಳೂರು: ‘ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ರಾತ್ರಿ ಕರ್ಫ್ಯೂದಿಂದ ಸಗಟು ಮಾರುಕಟ್ಟೆಗಳು ಹಾಗೂ ರೈತರಿಗೆ ಯಾವುದೇ ತೊಂದರೆಯಾಗಬಾರದು. ಸೋಂಕು ನೆಪದಲ್ಲಿ ಮಾರುಕಟ್ಟೆ ಬಂದ್ ಮಾಡುವ ನಿರ್ಧಾರಕ್ಕೆ ಬರಬಾರದು’ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಆರ್.ವಿ.ಗೋಪಿ,‘ರೈತರು ಬೆಳೆದ ತರಕಾರಿಗಳಿಗೆ ಬೇರೆ ರಾಜ್ಯಗಳಲ್ಲಿ ನಿರ್ಬಂಧ ಇಲ್ಲ. ಯಾವುದೇ ಸಗಟು ಮಾರುಕಟ್ಟೆಗಳನ್ನು ಬಂದ್ ಕೂಡ ಮಾಡಿಲ್ಲ. ಕೊರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಗುಂಪುಗಳನ್ನು ತಡೆಯಲು ವರ್ತಕರಿಗೆ ಸೂಚಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.
‘ಈಗ ಕರ್ಫ್ಯೂ ಇರುವುದರಿಂದ ರಾತ್ರಿ 10 ಗಂಟೆಗೆ ಮಾರುಕಟ್ಟೆ ಮುಚ್ಚಿ, ಬೆಳಿಗ್ಗೆ 5ರಿಂದ ಆರಂಭಿಸಲಾಗುತ್ತಿದೆ. ತರಕಾರಿ ಅಗತ್ಯ ವಸ್ತು. ಬೆಂಗಳೂರಿಗೆ ಮಾರುಕಟ್ಟೆಯಿಂದಲೇ ತರಕಾರಿ ಪೂರೈಕೆಯಾಗುತ್ತಿದೆ. ರೈತರ ಅವಲಂಬಿತ ಮಾರುಕಟ್ಟೆಗೆ ಕೊರೊನಾ ನೆಪದಲ್ಲಿ ಯಾವುದೇ ತೊಂದರೆ ಮಾಡಬಾರದು’ ಎಂದು ಮನವಿ ಮಾಡಿದ್ದಾರೆ.
‘ಈಗ ಲಾಕ್ಡೌನ್ ಜಾರಿ ಮಾಡಿದರೆ, ರೈತರು ಪರದಾಡುತ್ತಾರೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ, ರೈತರಿಗೆ ಅನ್ಯಾಯ ಆಗುತ್ತದೆ. ಯಾವ ಕಾರಣಕ್ಕೂ ಸಗಟು ಮಾರುಕಟ್ಟೆ ಬಂದ್ ಮಾಡುವ ನಿರ್ಧಾರ ಕೈಗೊಳ್ಳಬಾರದು. ಅನಿವಾರ್ಯ ಸಂದರ್ಭ ಎದುರಾದಲ್ಲಿ, ವರ್ತಕರು ಹಾಗೂ ರೈತರೊಂದಿಗೆ ಚರ್ಚಿಸಿ, ಪರ್ಯಾಯ ಕ್ರಮಗಳನ್ನು ಸೂಚಿಸಬೇಕು’ ಎಂದೂ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.