ADVERTISEMENT

ಪತ್ನಿ ಕೊಂದು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 17:58 IST
Last Updated 17 ಅಕ್ಟೋಬರ್ 2021, 17:58 IST

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ರೋಜಾ (28) ಎಂಬುವರನ್ನು ಕೊಂದು, ಅವರ ಪತಿ ಮಂಜುನಾಥ್ (36) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತಿಗರಳಪಾಳ್ಯದ ಮನೆಯೊಂದರಲ್ಲಿ ದಂಪತಿ ವಾಸವಿದ್ದರು. ಅದೇ ಮನೆಯಲ್ಲೇ ದಂಪತಿ ಮೃತದೇಹಗಳು ಭಾನುವಾರ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕನಕಪುರ ಸಾತನೂರಿನ ಮಂಜುನಾಥ್ ಹಾಗೂ ಮಳವಳ್ಳಿಯ ರೋಜಾ, ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿ ಮಕ್ಕಳು ಆಗಿರಲಿಲ್ಲ. ಮದ್ಯ ವ್ಯಸನಿ ಆಗಿದ್ದ ಮಂಜುನಾಥ್, ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪತ್ನಿಯನ್ನು ಥಳಿಸುತ್ತಿದ್ದ. ’

ADVERTISEMENT

‘ಶನಿವಾರ ರಾತ್ರಿಯೂ ದಂಪತಿ ನಡುವೆ ಜಗಳ ಆಗಿದೆ. ಇದೇ ಸಂದರ್ಭದಲ್ಲೇ ಆರೋಪಿ, ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ, ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಸಿಬ್ಬಂದಿ ಮನೆಗೆ ಹೋಗಿದ್ದರು. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಸ್ಥಳೀಯರ ಸಮ್ಮುಖದಲ್ಲಿ ಬಾಗಿಲು ಒಡೆಯಲಾಯಿತು. ನೇಣು ಬಿಗಿದ ಸ್ಥಿತಿಯಲ್ಲಿ ಮಂಜುನಾಥ್ ಮೃತದೇಹವಿತ್ತು. ಕೊಠಡಿಯಲ್ಲಿ ಪತ್ನಿ ಮೃತದೇಹ ಕಂಡಿತು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.