ADVERTISEMENT

ಪತ್ನಿ ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಆರೋಪಿ 24 ಗಂಟೆಯಲ್ಲೇ ಸೆರೆ

ಚಿತ್ರದುರ್ಗ ಡಿವೈಎಸ್ಪಿ ತಂಡದಿಂದ ಚುರುಕು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 19:50 IST
Last Updated 9 ಜನವರಿ 2022, 19:50 IST
ಸಿರಿಗೆರೆ ಸಮೀಪದ ಕೋಣನೂರು ಗ್ರಾಮಕ್ಕೆ ಆರೂಪಿಯನ್ನು ಮಹಜರಿಗಾಗಿ ಪೊಲೀಸರು ಮನೆಗೆ ಕರೆತಂದಿದ್ದರು.
ಸಿರಿಗೆರೆ ಸಮೀಪದ ಕೋಣನೂರು ಗ್ರಾಮಕ್ಕೆ ಆರೂಪಿಯನ್ನು ಮಹಜರಿಗಾಗಿ ಪೊಲೀಸರು ಮನೆಗೆ ಕರೆತಂದಿದ್ದರು.   

ಸಿರಿಗೆರೆ: ಸಮೀಪದ ಕೋಣನೂರು ಗ್ರಾಮದಲ್ಲಿ ಡಿ.25ರಂದು ಪತ್ನಿಯನ್ನು ಕೊಲೆ ಮಾಡಿ ಮಂಚದ ಕೆಳಗೆ ಹೂತಿಟ್ಟಿದ್ದ ಪ್ರಕರಣ ಸಂಬಂಧ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಕೊಣನೂರು ಗ್ರಾಮದ ಆರ್. ನಾರಪ್ಪ (40) ಬಂಧಿತ. ಈತ ತನ್ನ ಪತ್ನಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಬೆಣ್ಣೆಹಳ್ಳಿ ಗ್ರಾಮದ ಸುಮಾ (26) ಅವರನ್ನು ಕೊಲೆ ಮಾಡಿದ್ದ.

ಶವ ಪತ್ತೆಯಾದ 24 ಗಂಟೆಯೊಳಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋ‍‍ಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಡಿವೈಎಸ್ಪಿ ತಂಡ ಆರೋಪಿಯನ್ನು ಮಹಜರು ಮಾಡಲು ಕೋಣನೂರು ಗ್ರಾಮಕ್ಕೆ ಕರೆತಂದಿತು. ಕೊಲೆ ಮಾಡಿದ ಸಂದರ್ಭದಲ್ಲಿ ಬಳಸಿದ ಪರಿಕರಗಳ ಮಾಹಿತಿ ಪಡೆದು ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ADVERTISEMENT

ಆರೋಪಿಯನ್ನು ಪೊಲೀಸರು ಗ್ರಾಮಕ್ಕೆ ಕರೆತಂದಾಗ ಗ್ರಾಮಸ್ಥರು ಆರೋಪಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮರಣದಂಡನೆ ಜಾರಿಯಾಗ
ಬೇಕು ಎಂದು ಮಹಿಳೆಯರು ಶಪಿಸುತ್ತಿದ್ದ ದೃಶ್ಯ ಕಂಡುಬಂದಿತು. 24 ಗಂಟೆಯೊಳಗೆ ಬಂಧಿಸಿದ ಪೊಲೀಸರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಳಿವು ಕೊಟ್ಟ ಮಗ

ಆರೋಪಿ ನಾರಪ್ಪ ಪತ್ನಿಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಶವವನ್ನು ಮಂಚದ ಕೆಳಗೆ ಹೂತಿಟ್ಟ. ಮರುದಿನ ತನ್ನ 5 ವರ್ಷದ ಮಗ ನಾರದಮುನಿಯನ್ನು ಬೆಣ್ಣೆಹಳ್ಳಿಗೆ ಬಿಟ್ಟು ಹೋಗಿದ್ದ. ಆ ವೇಳೆ ಈತನ ತಾತ ಕರಿಯಪ್ಪ ಮೊಮ್ಮಗನನ್ನು ಪ್ರಶ್ನಿಸಿದಾಗ ‘ಅಪ್ಪ ಮನೆಯ ಒಳಗಡೆ ಸಿಮೆಂಟ್‍ ಕೆಲಸ ಮಾಡುತ್ತಿತ್ತು’ ಎಂದು ಹೇಳಿದ ವಿಷಯ ಅನುಮಾನ ಮೂಡಿತ್ತು. ಇದರಿಂದ ಅನುಮಾನಗೊಂಡು ಕರಿಯಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.