ಬೆಂಗಳೂರು: ಹಲ್ಲೆ, ಮಾನಸಿಕ ಕಿರುಕುಳ, ಕೊಲೆ ಬೆದರಿಕೆ ಹಾಕಿದ ಆರೋಪದ ಅಡಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ನಾಲ್ವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂದಿರಾನಗರದ ಡಿಫೆನ್ಸ್ ಕಾಲೊನಿಯ ನಿವಾಸಿ ಅಮೃತಾ ಗೋವರ್ಧನ್ ಅವರು ನೀಡಿದ ದೂರಿನ ಮೇರೆಗೆ ಅಮೃತಾ ಅವರ ಪತಿಯೂ ಆಗಿರುವ ಆಗ್ನೇಯ ವಿಭಾಗದ ಸೈಬರ್ ಠಾಣೆಯ ಎಸಿಪಿ ಗೋವರ್ಧನ್, ಅವರ ತಾಯಿ ಜ್ಞಾನಮಣಿ, ಡಿವೈಎಸ್ಪಿ ಅಶ್ವಿನಿ ಕುಮಾರಿ ಮತ್ತು ಅವರ ತಂದೆ ಬೈಲಮೂರ್ತಿ ಎಂಬುವವರ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ದೌರ್ಜನ್ಯ, ಹಲ್ಲೆ ಹಾಗೂ ಇತರೆ ಆರೋಪಗಳ ಅಡಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
‘ಗೋವರ್ಧನ್ ಹಾಗೂ ಅಶ್ವಿನಿ ಅವರು ಆತ್ಮೀಯತೆಯಿಂದ ಇದ್ದು, ನನಗೆ ಹಿಂಸೆ ನೀಡುತ್ತಿದ್ದಾರೆ’ ಎಂದು ಅಮೃತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಬ್ಬರು ಪೊಲೀಸ್ ಅಧಿಕಾರಿಗಳ ಮಧ್ಯೆ ವಾಟ್ಸ್ಆ್ಯಪ್ನಲ್ಲಿ ನಡೆದಿರುವ ಚಾಟಿಂಗ್ಗಳ ಸ್ಕ್ರೀನ್ಶಾಟ್ಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಎಸಿಪಿ ಗೋವರ್ಧನ್ ಅವರು 2014ರಲ್ಲಿ ನನ್ನನ್ನು ಮದುವೆ ಆಗಿದ್ದರು. ನಮಗೆ ಏಳು ವರ್ಷದ ಪುತ್ರಿ ಇದ್ದಾಳೆ’ ಎಂದು ಅಮೃತಾ ಅವರು ದೂರಿನಲ್ಲಿ ಹೇಳಿದ್ದಾರೆ.
‘ಗೋವರ್ಧನ್ ಅವರು 2022ರಲ್ಲಿ ಮೈಸೂರಿನಲ್ಲಿ ತರಬೇತಿಗೆ ತೆರಳಿದ್ದರು. ತರಬೇತಿ ವೇಳೆ ಅಶ್ವಿನಿ ಅವರ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಅದಾದ ಮೇಲೆ ಪತಿಯ ವರ್ತನೆಯಲ್ಲಿ ಬದಲಾವಣೆ ಆಗಿತ್ತು’ ಎಂದು ಅಮೃತಾ ದೂರಿನಲ್ಲಿ ವಿವರಿಸಿದ್ದಾರೆ.
‘ನನ್ನ ಪತಿಗೆ ಅಶ್ವಿನಿ ಅವರು ನಿರಂತರವಾಗಿ ಕರೆ ಮಾಡುತ್ತಿದ್ದರು. ಪತಿಯನ್ನು ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿ, ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು. ಅದಾದ ಮೇಲೆ ಅಶ್ವಿನಿ ಅವರನ್ನು ಸಂಪರ್ಕ ಮಾಡಲಾಯಿತು. ಅವರಿಗೂ ಮದುವೆಯಾಗಿ ನಾಲ್ಕು ವರ್ಷದ ಮಗು ಇರುವುದು ಗೊತ್ತಾಯಿತು. ಪತಿಯಿಂದ ದೂರ ಇರುವಂತೆ ಆಕೆಯ ಬಳಿ ಕೇಳಿಕೊಂಡೆ. ಅದನ್ನು ಆಕೆ ನಿರಾಕರಿಸಿದ್ದಳು. ಅಲ್ಲದೇ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿತ್ತು’ ಎಂದು ವಿವರಿಸಿದ್ದಾರೆ.
‘ಗೋವರ್ಧನ್ ಅವರ ಪೋಷಕರಿಗೂ ವಿಚಾರ ತಿಳಿಸಿದ್ದೆ. ಅದಕ್ಕೆ ಪುತ್ರನ ವೈಯಕ್ತಿಕ ವಿಚಾರಕ್ಕೆ ಹೋಗದಂತೆ ನನಗೇ ಹೇಳಿದ್ದರು. ನನ್ನ ಮೇಲೆ ಸೀಮೆಣ್ಣೆ ಸುರಿದು ಬೆಂಕಿಹಚ್ಚಲು ಪ್ರಯತ್ನಿಸಿದ್ದರು. ಅದರಿಂದ ಪಾರಾಗಿದ್ದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೆ’ ಎಂದು ಉಲ್ಲೇಖಿಸಿದ್ದಾರೆ.
‘ನನ್ನ ಪೋಷಕರು, ಗೋವರ್ಧನ್ಗೆ ಮನವಿ ಮಾಡಿದ್ದರು. ಅದಾದ ಮೇಲೆ ಅಶ್ವಿನಿಯಿಂದ ದೂರ ಇರುವುದಾಗಿ ಭರವಸೆ ನೀಡಿದ್ದರು. ಮತ್ತೆ ಸ್ನೇಹ ಮುಂದುವರಿಸಿದ್ದಾರೆ’ ಎಂದು ಅಮೃತಾ ದೂರಿದ್ದಾರೆ.
‘ಫೆಬ್ರುವರಿ 6ರಂದು ಹೈಗ್ರೌಂಡ್ಸ್ನಲ್ಲಿರುವ ಆಕೆಯ ಮನೆಗೆ ಹೋದಾಗ ಆಕೆಯ ತಂದೆ ನನಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಗೋವರ್ಧನ್, ಅಶ್ವಿನಿ ಮತ್ತು ಆಕೆಯ ತಂದೆ, ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಮಹಿಳೆ ದೂರಿದ್ದಾರೆ.
ವಿಚಾರಣಾ ಸಮಿತಿಗೂ ದೂರು
‘2024ರ ಜನವರಿ 2ರಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ವಿಚಾರಣಾ ಸಮಿತಿಗೆ ದೂರು ನೀಡಿದ್ದೆ. ವಿಚಾರಣಾ ಸಮಿತಿಯಿಂದ ಗೋವರ್ಧನ್ಗೆ ಸಮನ್ಸ್ ಬಂದಿತ್ತು. ದೂರು ವಾಪಸ್ ಪಡೆಯುವಂತೆಯೂ ಬೆದರಿಕೆ ಹಾಕಿದ್ದರು’ ಎಂದೂ ದೂರುದಾರೆ ತಿಳಿಸಿದ್ದಾರೆ.
ಪೊಲೀಸರಿಂದ ತನಿಖೆ
‘ಪೊಲೀಸರಿಗೆ ದೂರು ನೀಡಲಾಗಿದ್ದು ಅವರು ತನಿಖೆ ನಡೆಸಲಿದ್ದಾರೆ. ಗೋವರ್ಧನ್ ಇದಕ್ಕೂ ಮೊದಲು ವೈದ್ಯ ವೃತ್ತಿ ಮಾಡುತ್ತಿದ್ದರು. ನಂತರ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಅಶ್ವಿನಿ ಕಾರವಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋವರ್ಧನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಅಮೃತಾ ಪರ ವಕೀಲೆ ಗ್ರೀಷ್ಮಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.