ADVERTISEMENT

ಪ್ರಿಯಕರನ ಜೊತೆ ಸೇರಿ ಪತಿಯ ಕೊಂದು, ಮೃತದೇಹ ಚರಂಡಿಗೆ ಎಸೆದಿದ್ದ ಪತ್ನಿ

ಪ್ರಿಯಕರನ ಜೊತೆ ಸೇರಿ ಕೊಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 20:06 IST
Last Updated 30 ನವೆಂಬರ್ 2022, 20:06 IST
ಜಯಲಕ್ಷ್ಮಿ
ಜಯಲಕ್ಷ್ಮಿ   

ಬೆಂಗಳೂರು: ಪ್ರಿಯಕರನೊಂದಿಗೆಸೇರಿಕೊಂಡು ಪತಿಯನ್ನು ಕೊಲೆ ಮಾಡಿ ಸಿನಿಮೀಯ ಶೈಲಿಯಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ರಾಮನಗರದ ಬಳಿ ಚರಂಡಿಗೆ ಮೃತದೇಹ ಎಸೆದಿದ್ದ ಪತ್ನಿ ಹಾಗೂ ಪ್ರಿಯಕರನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದಾಸೇಗೌಡ (48) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಜಯಲಕ್ಷ್ಮಿ ಹಾಗೂ ಪ್ರಿಯಕರ ರಾಜೇಶ್‌ ಬಂಧಿತರು.

‘ದಾಸೇಗೌಡ ಹಾಗೂ ಜಯಲಕ್ಷ್ಮಿ ಮದುವೆಯಾಗಿ 16 ವರ್ಷಗಳು ಕಳೆದಿದ್ದವು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಫಾರ್ಮ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಜಯಲಕ್ಷ್ಮಿಗೆ ರಾಜೇಶ್‌ ಎಂಬಾತ ಪರಿಚಯವಾಗಿದ್ದ. ದಾಸೇಗೌಡ ಮನೆಯಲ್ಲಿ ಇಲ್ಲದಿದ್ದಾಗ ರಾಜೇಶ್‌ ಮನೆಗೆ ಬಂದುಹೋಗುತ್ತಿದ್ದ. ಇದೇ ವಿಷಯಕ್ಕೆ ಮನೆಯಲ್ಲಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅನೈತಿಕ ಸಂಬಂಧಕ್ಕೆ ದಾಸೇಗೌಡ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಕೊಲೆಗೆ ಇಬ್ಬರೂ ಸಂಚು ರೂಪಿಸಿದ್ದರು’ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ಭಾನುವಾರ ದನದ ಕೊಟ್ಟಿಗೆಯಲ್ಲಿದ್ದ ಹಗ್ಗ ತಂದು ಕತ್ತು ಬಿಗಿದು ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಪ್ಲಾಸ್ಟಿಕ್‌ ಚೀಲದಲ್ಲಿಟ್ಟು ರಾಮನಗರದ ಬಳಿ ಚರಂಡಿಗೆ ಎಸೆದಿದ್ದರು. ಹಗ್ಗ ಹಾಗೂ ಮೊಬೈಲ್‌ ದೂರಕ್ಕೆ ಎಸೆದು ಸಾಕ್ಷ್ಯನಾಶ ಪಡಿಸಿದ್ದರು. ಬಳಿಕ ಠಾಣೆಗೆ ಬಂದು ಪತಿ ಕಾಣೆಯಾಗಿರುವ ಕುರಿತು
ದೂರು ನೀಡಿದ್ದರು. ರಾಜೇಶ್‌ ತನ್ನ ತಮ್ಮನೆಂದು ಸುಳ್ಳು ಹೇಳಿದ್ದಳು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಾಸೇಗೌಡ ಅವರ ಸಹೋದರ ಇಬ್ಬರ ಸಂಬಂಧದ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಜಯಲಕ್ಷ್ಮಿ ವಿಚಾರಣೆ ನಡೆಸಲಾಯಿತು. ಆಗ ಈ ಕೊಲೆ ಪ್ರಕರಣದ ಕರಿತು ತಿಳಿದುಬಂತು. ರಾಜೇಶ್‌ ಹಾಗೂ ಜಯಲಕ್ಷ್ಮಿ ಪ್ರತಿನಿತ್ಯ ಮೊಬೈಲ್‌ ಫೋನ್‌ನಲ್ಲಿ ಮಾತನಾಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.