ಆನೇಕಲ್: ತಾಲ್ಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧಗ್ರಾಮಗಳಲ್ಲಿ 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಭಾನುವಾರ ರಾತ್ರಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಸುಣವಾರ, ಲಕ್ಷ್ಮಿಪುರ, ಮುತ್ತೂರು,ಕಾಳನಾಯಕನಹಳ್ಳಿ, ಬಸವನಪುರ, ಸಿಂಗಸಂದ್ರ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಸಂಚರಿಸಿವೆ. ಜಮೀನುಗಳಿಗೆ ನುಗ್ಗಿ ರಾಗಿ, ಇತರ ಬೆಳೆಗಳನ್ನು ತಿಂದಿವೆ. ಬಾಳೆ ತೋಟಕ್ಕೆ ನುಗ್ಗಿ ನಾಶಪಡಿಸಿವೆ.
ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿನತ್ತ ಓಡಿಸಿದರು. ಸೋಮವಾರ ರಾತ್ರಿ ಮುತ್ಯಾಲಮಡುವು ಸಮೀಪದ ಬಿದರಕಾಡಹಳ್ಳಿಯಲ್ಲಿ ಒಂಟಿ ಸಲಗ ಓಡಾಟ ನಡೆಸಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಿದರಕಾಡಹಳ್ಳಿಯ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.