ಬೆಂಗಳೂರು: ‘ಮಹಿಳೆ ಮುನ್ನೆಲೆಗೆ ಬಾರದೆ ಕೃಷಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾಳೆ. ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿರುವ ಅವಳು ಹೊಲದಲ್ಲಿ ಲೈಂಗಿಕ ಶೋಷಣೆ ಎದುರಿಸಿದರೆ, ಮನೆಗೆ ಬಂದಾಗ ಕುಡುಕ ಪತಿಯ ದೌರ್ಜನ್ಯಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಬೇಸರ
ವ್ಯಕ್ತಪಡಿಸಿದರು.
ವಿಕಾಸ ಪ್ರಕಾಶನನಗರದಲ್ಲಿ ಭಾನುವಾರ ಆಯೋಜಿಸಿದ್ದ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಶೇ 90 ರಷ್ಟು ಡೇರಿಗಳನ್ನು ಮಹಿಳೆಯರೇ ನಿರ್ವಹಣೆ ಮಾಡುತ್ತಿದ್ದಾರೆ. ಹಲವು ಮಹಿಳೆಯರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಆದರೆ, ಆಸ್ತಿಪಾಸ್ತಿ ಮಾತ್ರ ಅವರ ಹೆಸರಿನಲ್ಲಿ ಇರುವುದಿಲ್ಲ. ಮಹಿಳೆಗೂ ಆಸ್ತಿಯಲ್ಲಿ ಸಮಾನ ಪಾಲು ಸಿಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು.
ಲೇಖಕಿ ಡಾ. ವಸುಂಧರಾ ಭೂಪತಿ ಮಾತನಾಡಿ, ‘ಗ್ರಾಮೀಣ ಪ್ರದೇಶದ ಮಹಿಳೆಯರು ದಿನದ ಬಹುತೇಕ ಅವಧಿ ಕೃಷಿ ಚಟುವಟಿಕೆಯಲ್ಲಿಯೇ ತೊಡಗಿರುತ್ತಾರೆ. ಕೃಷಿಗೆ ಭೂಮಿ ಇಲ್ಲದಿದ್ದರೂ ನಗರ ಪ್ರದೇಶದ ಮಹಿಳೆಯರು ಮನೆ ಮುಂದೆ ಹೂವು ಹಾಗೂ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತಾರಸಿ ತೋಟ ಕೂಡ ಮಾಡುತ್ತಿದ್ದಾರೆ. ಆದರೆ, ಕೃಷಿ ಕ್ಷೇತ್ರದಲ್ಲಿ ಮಹಿಳೆಗೆ ಸಿಗಬೇಕಾದ ಮಾನ್ಯತೆ ದೊರೆಯಲಿಲ್ಲ‘
ಎಂದರು.
ರೈತ ಮಹಿಳೆಯರಾದ ಅಕ್ಕಮ್ಮ ಹಾಗೂ ಮೀನಾಕ್ಷಿ ಭಟ್ಟ ಕೃತಿ ಬಿಡುಗಡೆ ಮಾಡಿದರು.
ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ, ಲೇಖಕಿ ಭಾರತಿ ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.