ADVERTISEMENT

ಗೃಹಿಣಿ ಆತ್ಮಹತ್ಯೆ: ಗಂಡ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 19:37 IST
Last Updated 15 ಮೇ 2019, 19:37 IST

ಬೆಂಗಳೂರು: ರಾಜರಾಜೇಶ್ವರಿನಗರದ ಬಿಇಎಲ್ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ಮಂಜುಳಾ (26) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೃತರ ಪತಿ ಗಿರೀಶ್ ಅವರನ್ನು ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದಡಿ ಬಂಧಿಸಿದ್ದಾರೆ.

ಕೌಟುಂಬಿಕ ವಿಷಯವಾಗಿ ರಾತ್ರಿ 11.30ರ ಸುಮಾರಿಗೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಗ ಗಿರೀಶ್ ಸಿಟ್ಟಿನಲ್ಲಿ ತಮ್ಮ ಒಂದೂವರೆ ವರ್ಷದ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಬಂದಿದ್ದರು. ಈ ವೇಳೆ ಮಂಜುಳಾ ನೇಣಿಗೆ ಶರಣಾಗಿದ್ದು, ಸ್ವಲ್ಪ ಸಮಯದ ಬಳಿಕ ಪತಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

‘ನಾನು ರಾಜರಾಜೇಶ್ವರಿನಗರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದೇನೆ. ಮುಂಗೋಪಿಯಾಗಿದ್ದ ಪತ್ನಿ, ಸಣ್ಣ–ಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದಳು. ಮಂಗಳವಾರ ರಾತ್ರಿ ಕೂಡ ಆಕೆ ಕೂಗಾಡುತ್ತಿದ್ದರಿಂದ ಮನೆಯಿಂದ ಆಚೆ ಹೋಗಿದ್ದೆ. ವಾಪಸ್ ಬರುವಷ್ಟರಲ್ಲಿ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿ ಮೂಲಕ ನೋಡಿದಾಗ ಆಕೆ ನೇಣಿಗೆ ಶರಣಾಗಿದ್ದಳು’ ಎಂದು ಗಿರೀಶ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದರು.

ADVERTISEMENT

‘ನನ್ನ ಸಾವಿಗೆ ಗಂಡ ಹಾಗೂ ಅವರ ಕುಟುಂಬ ಸದಸ್ಯರೇ ಕಾರಣ’ ಎಂದು ಮಂಜುಳಾ ಬರೆದಿಟ್ಟಿರುವ ಪತ್ರ ಕೋಣೆಯಲ್ಲಿ ಸಿಕ್ಕಿದೆ. ಆ ಪತ್ರ ಹಾಗೂ ಮೃತರ ಪೋಷಕರ ದೂರಿನ ಮೇರೆಗೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಗಿರೀಶ್ ಅವರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.