
ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್
ಬೆಂಗಳೂರು: ನಗರದ ಹೊರ ವಲಯದಲ್ಲಿರುವ ‘ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್’ನಲ್ಲಿ ಶೇಕಡ 83ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂದು ವಂಡರ್ಲಾ ಹಾಲಿಡೇಸ್ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ ತಿಳಿಸಿದರು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಂಡರ್ಲಾ ಬೆಂಗಳೂರು’ ಇಪ್ಪತ್ತು ವರ್ಷಗಳ ಸಂಭ್ರಮದಲ್ಲಿದ್ದು, ಇದುವರೆಗೂ 1.82 ಕೋಟಿಗೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ಇದು ಭಾರತದ ನಂಬರ್ ಒನ್ ಅಮ್ಯೂಸ್ಮೆಂಟ್ ಪಾರ್ಕ್ ಆಗಿ ಬೆಳೆದಿದೆ. ಇದರಲ್ಲಿ ಸ್ಥಳೀಯ ಆಡಳಿತ ಹಾಗೂ ಜನರ ಸಹಕಾರ ಹೆಚ್ಚಿದೆ ಎಂದು ಮಾಹಿತಿ ನೀಡಿದರು.
‘ನಮ್ಮ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್ಆರ್) ಬಳಸಿಕೊಂಡು ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ. ಸ್ಥಳೀಯ ಶಾಲಾ–ಕಾಲೇಜುಗಳ ಕಟ್ಟಡಗಳು, ಅಂಗನವಾಡಿ ಕಟ್ಟಡಗಳ ದುರಸ್ತಿ, ಶೌಚಾಲಯಗಳ ನಿರ್ಮಾಣ ಸೇರಿದಂತೆ ಸಮುದಾಯ ಭವನ ನಿರ್ಮಿಸುವ ಕಾರ್ಯಕ್ಕೂ ಚಾಲನೆ ನೀಡಲಾಗುತ್ತಿದೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರ ಸೇರಿದಂತೆ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದೇವೆ’ ಎಂದು ಹೇಳಿದರು.
‘ವಂಡರ್ಲಾಗೆ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೆ ಮನರಂಜನೆಯ ಜೊತೆಗೆ ಸುರಕ್ಷತೆಯ ಭರವಸೆ ನೀಡುತ್ತಿದ್ದೇವೆ. ವಂಡರ್ಲಾ ನಗರದಿಂದ 28 ಕಿ.ಮೀ ದೂರದಲ್ಲಿದ್ದು, ಬಿಡದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗ, ಪ್ರವಾಸೋದ್ಯಮ ಬೆಳೆಯಲು ಒತ್ತು ನೀಡುತ್ತಿದ್ದೇವೆ’ ಎಂದು ತಿಳಿಸಿದರು.
ವಂಡರ್ಲಾ ಬೆಂಗಳೂರಿನ ಮುಖ್ಯಸ್ಥ ಎಚ್.ಎಸ್. ರುದ್ರೇಶ್, ಧೀರನ್ ಚೌಧರಿ ಸುದ್ದಿಗೋಷ್ಠಿಯಲ್ಲಿದ್ದರು.