ಬೆಂಗಳೂರು: ನಗರದ ಹೊಸೂರು ರಸ್ತೆ ಬೊಮ್ಮನಹಳ್ಳಿಯ ಕಾಂಕ್ರಿಟ್ ಮಿಕ್ಸಿಂಗ್ ನ ಆವರಣದಲ್ಲಿ ‘ನಮ್ಮ ಮೆಟ್ರೊ’ ಕಟ್ಟಡ ಕಾರ್ಮಿಕರು ಭಾನುವಾರವೂ ಪ್ರತಿಭಟನೆ ನಡೆಸಿದರು.
ತವರು ರಾಜ್ಯಕ್ಕೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದ ಜಾರ್ಖಂಡ್ ಕಾರ್ಮಿಕರು, ಬಿಎಂಆರ್ಸಿಎಲ್ ವಿರುದ್ಧ ಪ್ರತಿಭಟನೆ ನಡೆಸಿದರು. ‘ಬಿಹಾರ ರಾಜ್ಯದವರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ. ನಮ್ಮನ್ನೂ ಇಂದೇ (ಭಾನುವಾರ) ನಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ’ ಎಂದು ಒತ್ತಾಯಿಸಿದರು.‘ಮಾರ್ಚ್, ಏಪ್ರಿಲ್ ತಿಂಗಳ ವೇತನ ಆಗಿಲ್ಲ’ ಎಂದು ಕೆಲವು ಕಾರ್ಮಿಕರು ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸೋಮವಾರ ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದಾಗಿ ಜಾರ್ಖಂಡ್ ಕಾರ್ಮಿಕರಿಗೆ ಭರವಸೆ ನೀಡಿದ ನಂತರ ಅವರು ಪ್ರತಿಭಟನೆ ಹಿಂತೆಗೆದುಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಎಲ್ಲ ಕಾರ್ಮಿಕರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವೇತನ ಪಾವತಿಸಲಾಗಿದೆ ಎಂದು ಹೇಳಿದ್ದಲ್ಲದೆ, ದಾಖಲೆಗಳನ್ನು ತೋರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.