ಬೆಂಗಳೂರು: ‘ತುಳುವರು ತಮ್ಮ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ, ಯುವಪೀಳಿಗೆಯು ಇಂಗ್ಲಿಷ್ ಮೋಹಕ್ಕೆ ಒಳಗಾಗಿ ತುಳು ಮರೆಯುತ್ತಿದ್ದಾರೆ’ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿಷಾದಿಸಿದರು.
ತುಳುಕೂಟ ಬೆಂಗಳೂರು ಇದರ 50ನೇ ವರ್ಷದ ಸಂಭ್ರಮದ ಪ್ರಯುಕ್ತ ನಗರದಲ್ಲಿ ಶುಕ್ರವಾರ ನಡೆದ ವಿಶ್ವ ತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು.
‘ತುಳುವಿಗೆ ಜಾತಿ, ಧರ್ಮಗಳ ಮಿತಿ ಇಲ್ಲ. ಎಲ್ಲ ಧರ್ಮ, ಜಾತಿ ಸಮುದಾಯದವರ ಭಾಷೆ, ಸಂಸ್ಕೃತಿ ತುಳು. ಹಿಂದೆ ತುಳುವಿಗೆ ಲಿಪಿ ಇತ್ತು. ಆದರೆ, ಅದನ್ನು ಯಾರೂ ಬಳಸದ ಕಾರಣ ನಾವೆಲ್ಲ ತುಳುವನ್ನು ಕನ್ನಡ ಲಿಪಿಯಲ್ಲೇ ಬರೆಯುತ್ತಿದ್ದೇವೆ. ಈಗ ತುಳು ಲಿಪಿಯನ್ನು ಕಲಿಸುವ ಕೆಲಸವಾಗುತ್ತಿದೆ. ತುಳುವರೆಲ್ಲರೂ ತುಳು ಲಿಪಿ ಕಲಿಯಬೇಕು’ ಎಂದು ಸಲಹೆ ನೀಡಿದರು.
‘ತುಳುವರು ಎಲ್ಲೇ ಹೋದರೂ ತಮ್ಮ ಸಂಸ್ಕೃತಿಯನ್ನು ಹರಡುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
‘ತುಳು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಂಬಳ ಈಗ ತುಳು ನಾಡಿನ ಗಡಿ ದಾಟಿ ಬೆಂಗಳೂರಿಗೆ ಬಂದಿದೆ. ಹೊರರಾಜ್ಯ, ಹೊರದೇಶಗಳಿಗೆ ತುಳುವರು ಹೋದರೆ, ಅಲ್ಲಿ ತಮ್ಮ ಛಾಪು ಮೂಡಿಸುತ್ತಾರೆ’ ಎಂದು ಶ್ಲಾಘಿಸಿದರು.
‘ನಾಗರಿಕತೆಗೆ ಸಂಸ್ಕಾರ ಸೇರಿದರೆ ಸಂಸ್ಕೃತಿಯಾಗುತ್ತದೆ. ಅಂಥ ವಿಶಿಷ್ಠ ಸಂಸ್ಕೃತಿಯನ್ನು ತುಳು ಹೊಂದಿದೆ. ನಾನು ಮೂರು ಮಹಾಕಾವ್ಯಗಳನ್ನು ಕನ್ನಡದಲ್ಲಿ ಬರೆದಿದ್ದರೂ ಅದರ ಆತ್ಮ ತೌಳವ ಸಂಸ್ಕೃತಿಯೇ ಆಗಿದೆ’ ಎಂದು ವಿವರಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ವೀರಪ್ಪ ಮೊಯ್ಲಿ, ಸೆಂಚೂರಿ ಬಿಲ್ಡರ್ ಅಧ್ಯಕ್ಷ ದಯಾನಂದ ಪೈ, ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕ ಅಮೈ, ದುಬೈ ತುಳು ವಿಶ್ವಸಮ್ಮೇಳನದ ರೂವಾರಿ ಸರ್ವೋತ್ತಮ ಶೆಟ್ಟಿ, ಕತಾರ್ ತುಳುಕೂಟದ ಮಾಜಿ ಅಧ್ಯಕ್ಷ ದಿವಾಕರ ಪೂಜಾರಿ, ದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸದಾನಂದ ಶೆಟ್ಟಿ, ಕುವೈತ್ ತುಳುಕೂಟದ ಮಾಜಿ ಅಧ್ಯಕ್ಷ ವಿಲ್ಸನ್ ಡಿಸೋಜ, ಸಮಾಜ ಸೇವಕ ಅಬ್ದುಲ್ಲಾ ಮಾದುಮೂಲೆ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನದ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು, ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಅಶೋಕ್ ಕುಮಾರ್ ರೈ, ಸಂಗೀತ ನಿರ್ದೇಶಕ ಗುರುಕಿರಣ್, ತುಳುಕೂಟ ಅಧ್ಯಕ್ಷ ಸುಂದರರಾಜ್ ರೈ, ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ. ಇದ್ದರು.
ಕುಣಿತ ಭಜನೆ, ತುಳು ಪದರಂಗಿತ (ಹಾಡು), ತುಳು ಜನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.