ADVERTISEMENT

ಬ್ಯಾಂಕ್‌ ವಂಚನೆ ಪ್ರಕರಣ: ಟಿಡಿಪಿ ಸಂಸದನಿಗೆ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:11 IST
Last Updated 25 ಏಪ್ರಿಲ್ 2019, 20:11 IST

ಬೆಂಗಳೂರು: ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಜ್ಯಸಭೆಯ ಟಿಡಿಪಿ (ತೆಲುಗುದೇಶಂ ಪಕ್ಷ) ಸದಸ್ಯ ವೈ.ಎಸ್‌. ಚೌದರಿ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ.

ಬೆಂಗಳೂರು ಸಿಬಿಐ ಕಚೇರಿಗೆ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಹಾಜರಾಗುವಂತೆ ಚೌದರಿ ಅವರಿಗೆ ತಿಳಿಸಲಾಗಿದೆ. ಆಂಧ್ರ ಬ್ಯಾಂಕಿಗೆ ₹ 71 ಕೋಟಿ ವಂಚಿಸಿದ ಆರೋಪಕುರಿತು ರಾಜ್ಯಸಭೆ ಸದಸ್ಯರನ್ನು ಪ್ರಶ್ನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚೆನ್ನೈ ಮೂಲದ ಎಲೆಕ್ಟ್ರಿಕಲ್‌ ಉತ್ಪನ್ನಗಳ ತಯಾರಕರಾದ ‘ಬೆಸ್ಟ್‌ ಅಂಡ್‌ ಕ್ರಾಂಪ್ಟನ್‌ ಎಂಜಿನಿಯರಿಂಗ್‌ ಪ್ರಾಜೆಕ್ಟ್ಸ್‌ಲಿ’. ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸ ಕಲ್ಯಾಣರಾವ್‌ ಸೇರಿದಂತೆ ಐವರು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಂಚನೆ, ಫೋರ್ಜರಿ ಹಾಗೂ ಪಿತೂರಿ ಮತ್ತಿತರ ಆರೋಪಗಳನ್ನು ಮಾಡಲಾಗಿದೆ.

ADVERTISEMENT

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಆಪ್ತರೆನ್ನಲಾದ ಚೌದರಿ ಅವರು ಆಂಧ್ರ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕುಗಳಿಗೆ ₹ 5700 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ರಾಜ್ಯಸಭೆ ಸದಸ್ಯರಿಗೆ ಸೇರಿರುವ ಮರ್ಸಿಡೀಸ್‌ ಬೆಂಜ್‌, ರೇಂಜ್‌ ರೋವರ್‌, ಫೆರಾರಿ ಸೇರಿದಂತೆ ಆರು ದುಬಾರಿ ಬೆಲೆಯ ಕಾರುಗಳನ್ನು ಕಳೆದ ನವೆಂಬರ್‌ನಲ್ಲಿ ಜಪ್ತಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.