ಬೆಂಗಳೂರು: ಮೈಸೂರು ಒಡೆಯರ್ ಅವರ ಇತಿಹಾಸ ಸಾರುವ ‘ದ ಗ್ಲೋರಿ ದಟ್ ವಾಸ್ ದ ಒಡೆಯರ್ಸ್ ಆಫ್ ಮೈಸೂರು’ ಪುಸ್ತಕವನ್ನು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿದರು.
ಜ್ಞಾನ ದೀಪಿಕಾ ಎಜುಕೇಷನ್ ಟ್ರಸ್ಟ್ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೈಸೂರಿನ ಇತಿಹಾಸ ಅಗೆದಷ್ಟು ಸಿಗುತ್ತದೆ. ಮೈಸೂರು ಸಂಸ್ಥಾನದ ಕೊಡುಗೆಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಭಾಷೆ, ಸಾಹಿತ್ಯ ಹಾಗೂ ಕಲೆ ಉಳಿವಿಗೆ ಮೈಸೂರು ಸಂಸ್ಥಾನ ಅಪಾರ ಕೊಡುಗೆ ನೀಡಿದೆ’ ಎಂದು ಯದುವೀರ್ ಹೇಳಿದರು.
ಶಿಕ್ಷಣ ತಜ್ಞ ಗುರುರಾಜ ಕರಜಗಿ, ‘ಮೈಸೂರು ಸಂಸ್ಥಾನ ಉತ್ತಮ ಆಡಳಿತ ನೀಡುವ ಮೂಲಕ ಇಡೀ ದೇಶದಲ್ಲಿ ಹೆಸರು ವಾಸಿಯಾಗಿದೆ. ಆಧುನಿಕ ಮೈಸೂರು ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.
ಲೇಖಕ ಎನ್. ಸತ್ಯಪ್ರಕಾಶ್, ‘ಮೈಸೂರು ಒಡೆಯರ ಪರಂಪರೆಯ ಸಮಸ್ತ ವಿವರಗಳು, ಇತಿಹಾಸ, ಕಲೆ ಸಾಹಿತ್ಯ ಸಂಗೀತದ ಎಲ್ಲ ಆಯಾಮಗಳನ್ನು ಈ ಕೃತಿ ಒಳಗೊಂಡಿದೆ. ಮೈಸೂರು ಸಂಸ್ಥಾನವನ್ನು ಆಳಿದ ರಾಜರ ಬಗ್ಗೆ ಮಾಹಿತಿ ಇದೆ. ರಾಜಕೀಯ ಇತಿಹಾಸದ ಜತೆಗೆ ಒಡೆಯರ ಕಾಲದ ಸಾಂಸ್ಕೃತಿಕ ವೈಭವದ ಬಗ್ಗೆ ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.