ಬೆಂಗಳೂರು: ಯಕ್ಷಗಾನವನ್ನು ಬರೀ ಕರಾವಳಿ ಭಾಗಕ್ಕೆ ಸೀಮಿತಗೊಳಿಸದೇ ಕರ್ನಾಟಕದ ಕಲೆಯಾಗಿ ಬೆಳೆಸಬೇಕು ಎಂದು ಯಕ್ಷಗಾನ ವಿದ್ವಾಂಸ ಆನಂದರಾಮ ಉಪಾಧ್ಯ ಸಲಹೆ ನೀಡಿದರು.
ನಗರದ ಯಕ್ಷಸಿಂಚನ ಟ್ರಸ್ಟ್ನ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಭಾಗದಲ್ಲಿ ಯಕ್ಷಗಾನ ಪ್ರಮುಖ ಕಲೆ. ಇಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆಯೂ ಅಧಿಕವಾಗಿದೆ. ಹಾಗೆಂದು ಯಕ್ಷಗಾನವು ಕೇವಲ ಕರಾವಳಿಯ ಕಲೆಯಾಗಿ ಉಳಿಯಬಾರದು ಎಂದು ಹೇಳಿದರು.
ಯಕ್ಷಗಾನದ ಪರಂಪರೆ, ತಿಟ್ಟುಗಳು ಉಳಿಯಬೇಕಾದರೆ ಹವ್ಯಾಸಿ ಕಲಾವಿದರೇ ಪ್ರಮುಖ ಶಕ್ತಿಯಾಗಬೇಕು ಎಂದು ತಿಳಿಸಿದರು.
ಶ್ರೀಪಾದ ಹೆಗಡೆ ಹುಕ್ಲಮಕ್ಕಿ, ಪತ್ರಕರ್ತ ಸುಧೀಂದ್ರ ಭಾರದ್ವಾಜ್, ಸಂಸ್ಥೆ ನಿರ್ದೇಶಕ ಕೃಷ್ಣಮೂರ್ತಿ ತುಂಗರ ಮಾತನಾಡಿದರು.
ಹಿಮ್ಮೇಳ ವಾದಕರಾದ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ನಾಲ್ಕು ದಶಕಗಳ ಯಕ್ಷಗಾನ ಸೇವೆಗಾಗಿ 'ಸಾರ್ಥಕ ಸಾಧಕ ಗೌರವ ಪ್ರಶಸ್ತಿ–2025' ಪ್ರದಾನ ಮಾಡಲಾಯಿತು.
ಬೆಂಗಳೂರು ಯಕ್ಷ ಕಲಾ ಅಕಾಡೆಮಿ ಬಾಲ ಕಲಾವಿದರು ಪಾರ್ತಿಸುಬ್ಬರ ಕೃತಿ ರಾಮ–ಪರಶುರಾಮ, ಯಕ್ಷಸಿಂಚನ ತಂಡದ ಕಲಾವಿದರು ದಿನಕರ ಪಚ್ಚನಾಡಿ ರಚಿತ ತರಣಿಸೇನ ಪ್ರಸಂಗ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.