ಬೆಂಗಳೂರು: ‘ಸರ್ಕಾರದ ನೆರವಿಲ್ಲದೆ ಜನರೇ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ಕಲಾ ಪ್ರಕಾರ ಯಕ್ಷಗಾನ’ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.
ಇಲ್ಲಿನ ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಮೋದಾಳಿ ಪರಿಣಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ಈ ತಾಳಮದ್ದಳೆಯು ಪಿ. ಚಂದ್ರಿಕಾ ಅವರ ‘ಮೋದಾಳಿ’ ನಾಟಕ ಆಧರಿಸಿದೆ.
‘ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ. ಈ ಕಲೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗದೆ, ಅಖಂಡ ಕರ್ನಾಟಕದ ಕಲೆಯಾಗಿದೆ. ಭಾಷಾ, ವೇಷ, ಶೈಲಿ, ಕಥನ ಎಲ್ಲ ರೀತಿಯಲ್ಲಿಯೂ ತನ್ನ ದೇಸೀತನವನ್ನು ಉಳಿಸಿಕೊಂಡು, ಆಧುನಿಕ ಪರಿವೇಷದಲ್ಲಿಯೂ ತನ್ನ ಅನನ್ಯತೆಯನ್ನು ಈ ಕಲೆ ಉಳಿಸಿಕೊಂಡಿದೆ. ಇದು ಕೇವಲ ಕಲೆ ಮಾತ್ರವಾಗಿರದೆ, ಸಮುದಾಯ ಶಿಕ್ಷಣಕ್ಕೂ ನೆರವಾಗುವುದರಿಂದ ಸರ್ಕಾರ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಲೇಖಕಿ ಚಂದ್ರಿಕಾ, ‘ನನ್ನ ನಾಟಕದ ಕಥೆಯ ಧಾರೆ ತಾಳಮದ್ದಳೆಯಲ್ಲಿಯೂ ಹಾಗೇ ಇರುವುದು ಸಂತೋಷವನ್ನುಂಟು ಮಾಡಿದೆ’ ಎಂದರು.
ಕೃತಿ ಆರ್. ಪುರಪ್ಪೇಮನೆ ಅವರ ರಚನೆ, ನಿರ್ದೇಶನ ಹಾಗೂ ಭಾಗವತಿಕೆಯ ‘ಮೋದಾಳಿ ಪರಿಣಯ’ ಯಕ್ಷಗಾನ ತಾಳಮದ್ದಳೆಯ ಮುಮ್ಮೇಳದಲ್ಲಿ ಜಯಶ್ರೀ ಶರ್ಮ, ಪ್ರಶಾಂತಿ ರಾವ್, ಜಯಶ್ರೀ ಸಾಗರ, ನಿರ್ಮಲಾ ಕೃಷ್ಣಮೂರ್ತಿ, ರೂಪಜ ರಾವ್, ಅಕ್ಷತಾ ಹುಂಚದಕಟ್ಟೆ ಪ್ರದರ್ಶನ ನೀಡಿದರು. ಮದ್ದಳೆ–ಚಂಡೆಯಲ್ಲಿ ಕುಶ ಎಂ.ಆರ್., ಶ್ರೀನಿವಾಸ್ ಪುರಪ್ಪೇಮನೆ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.